ಕಲಬುರಗಿ: ಕಳೆದ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ 289 ಮಂದಿ ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ವರದಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಗರ್ಭಿಣಿಯರ ಸಾವಿಗೆ ಹಲವು ಕಾರಣಗಳನ್ನು ಆರೋಗ್ಯ ಇಲಾಖೆ ನೀಡಿದೆ. ಅದರೆ, ಹೆಲ್ತ್ ಹಬ್ ಎಂದು ಕರೆಯಿಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲೆ ಅತೀ ಹೆಚ್ಚು ಸಾವಾಗಿರುವುದು ದುರದೃಷ್ಟಕರ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ 289 ಮಂದಿ ಗರ್ಭಿಣಿಯರಲ್ಲಿ ಹೆಚ್ಚಿನವರು ಕಲಬುರಗಿ ಜಿಲ್ಲೆಯವರಾಗಿದ್ದಾರೆ. ಇನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಲಬುರಗಿಯವರಾಗಿದ್ದು, ತಮ್ಮ ಜಿಲ್ಲೆಯನ್ನು ಹೆಲ್ತ್ ಹಬ್ ಮಾಡುತ್ತವೆ ಎನ್ನುತ್ತಿದ್ದಾರೆ. ಆದರೆ, ಅವರದ್ದೇ ಜಿಲ್ಲೆಯಲ್ಲಿ ಅತೀ ಹೆಚ್ಚು ಗರ್ಭಿಣಿಯರು ಸಾವಾಗಿರುವುದು ಆತಂಕ ಸೃಷ್ಟಿಸಿದೆ. ಪ್ರತಿ ವರ್ಷ ಇಷ್ಟೊಂದು ಗರ್ಭಿಣಿಯರು ತಾಯ್ತನದ ಖುಷಿ ಅನುಭವಿಸುವ ಮುನ್ನವೇ ಉಸಿರು ಚೆಲ್ಲುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇಷ್ಟೊಂದು ಮಂದಿ ಗರ್ಭಿಣಿಯರು ಮೃತಪಟ್ಟಿದ್ದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು, ಗರ್ಭಿಣಿಯರ ಸಾವಿಗೆ ಕಾರಣವೇನು ಎಂಬುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿಲ್ಲ ಎನ್ನಲಾಗುತ್ತಿದೆ.
ಕಲಬುರಗಿಯಲ್ಲಿ ಎರಡು ವರ್ಷ ಅಂತರದಲ್ಲಿ 66 ಮಂದಿ ಗರ್ಭಿಣಿಯರು ಮೃತಪಟ್ಟಿದ್ದು, ಇದರಲ್ಲಿ ಪ್ರಸವ ಪೂರ್ವ ಹಾಗೂ ಪ್ರಸವ ನಂತರ ಸಾವನ್ನಪ್ಪಿದವರೂ ಇದ್ದಾರೆ. ಗರ್ಭಿಣಿಯರ ಸಾವು ತಡೆಗಟ್ಟುವ ಬಗ್ಗೆ ಆರೋಗ್ಯ ಇಲಾಖೆ ಇಲ್ಲಿಯವರೆಗೆ ಚಿಂತನೆ ನಡಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ.



