ಸೆಂಟ್ರಿಂಗ್ ವಸ್ತುಗಳನ್ನು ತೆಗೆಯಲು ಸೆಪ್ಟಿಕ್ ಟ್ಯಾಂಕ್ ಗೆ ಇಳಿದಿದ್ದ 6 ಮಂದಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಒಡಿಶಾದಲ್ಲಿ ಸಂಭವಿಸಿದೆ.
ಕಲಾಹಂಡಿ ಜಿಲ್ಲೆಯ ಗೌಡಾ ಕಾರ್ಲಖುಂಟ ಮಂಗಳವಾರ ಈ ದುರಂತ ಸಂಭವಿಸಿದ್ದು, ಗೌಡ ಕಾರ್ಲಖುಂಟದ ಮನೆ ಮಾಲೀಕ ನಿಮೈನ್ ಪಾಲ್, ಅವರ ಮಗ ಆಕಾಶ್ ಪಾಲ್, ಇದೇ ಗ್ರಾಮದ ಅದಾಲ್ ಮಾಝಿ, ಮಾತೋಗಂಡ ಗ್ರಾಮದ ಮನೋರಂಜನ್ ಹಟಿ, ದೂತ ಗ್ರಾಮದ ಛಂದ ಜಲ್ ಮತ್ತು ಬಿಪುಲ್ ಜಲ್ ಮೃತ ದುರ್ದೈವಿಗಳು.
ಹತಿಖೋಜ್ ಗ್ರಾಮದ ಗಾಯಗೊಂಡ ಪಂಕಜ್ ಭೋಯ್ ಅವರನ್ನು ಮೊದಲು ಮದನಪುರ ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಭವಾನಿಪಟ್ನ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕೆಸಿಂಗ ಪೊಲೀಸ್ ಎಸ್ಡಿಪಿಒ ಸಂದೀಪ್ ಮಾಝಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸಿಎಂ, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ.
ಟ್ಯಾಂಕ್ ಒಳಗೆ ಇಳಿದ ಕೆಲವು ಸಮಯದಲ್ಲಿ ಕೆಲಸಗಾರರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಗಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅನುಮಾನ ಬಂದು ಅಲ್ಲಿದ್ದವರು ಒಬ್ಬೊಬ್ಬರಾಗಿ ಟ್ಯಾಂಕ್ ಒಳಗೆ ಇಳಿದಿದ್ದಾರೆ. ರಕ್ಷಿಸುವ ಭರದಲ್ಲಿ ಅವರೂ ಸಹ ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡಗಳು ಎಲ್ಲ ಮೃತದೇಹಗಳನ್ನು ಟ್ಯಾಂಕ್ನಿಂದ ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಮದನ್ಪುರ ರಾಂಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಗಾಯಗೊಂಡ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯ ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಮದನ್ಪುರ ರಾಂಪುರ್ ಪೊಲೀಸರು ತಿಳಿಸಿದ್ದಾರೆ.



