ಬೆಂಗಳೂರು: ಗೂಡ್ಸ್ ಆಟೋದಲ್ಲಿ ಆಂಧ್ರದಿಂದ ಬೆಂಗಳೂರಿಗೆ ಗಾಂಜಾ ಸಾಗಣೆ ಮಾಡುತ್ತಿದ್ದ ಅಂತರಾಜ್ಯದ ೬ ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಕಾಟನ್ಪೇಟೆ ಪೊಲೀಸರು 42 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ರಾಜಸ್ಥಾನದ ಪಾಳಿ ಜಿಲ್ಲಾ ಮೂಲದ ಕಾಟನ್ ಪೇಟೆಯ ಶಂಕರ್ ಲಾಲ್ ಅಲಿಯಾಸ್ ಅಜಯ್ (38) ಒಡಿಸ್ಸಾದ ಬಲೇಶ್ವರ್ ಜಿಲ್ಲಾ ಮೂಲದ ಭುವನೇಶ್ವರಿ ನಗರದ ಅನಿರುದ್ಧ ದಲೈ (38) ಜಾರ್ಖಾಂಡ್ ನ ರಾಮಗಡ್ ಜಿಲ್ಲೆಯ ಚೆನ್ನಸಂದ್ರದ ಬಸಂತ್ ಕುಮಾರ್ (35), ಹಜರಿಬಾಗ್ ಜಿಲ್ಲೆಯ ಅಜಿತ್ ಕುಮಾರ್ ಸಿಂಗ್(43), ಬಿಹಾರದ ಸಮಸ್ತಿಪುರ್ ಜಿಲ್ಲಾ ಮೂಲದ ದೀಪಕ್ ಕುಮಾರ್ ಅಲಿಯಾಸ್ ದೀಪಕ್ ಮೆಹ್ರಾವ (27), ಬಿಹಾರದ ವೈಶಾಲಿ ಜಿಲ್ಲೆಯ ಅಮರನಾಥ ಜೈಸ್ವಾಲ್ ಅಲಿಯಾಸ್ ಮಿಶ್ರಾವ (61) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 42 ಲಕ್ಷ ಮೌಲ್ಯದ 53.5 ಕೆ.ಜಿ ಗಾಂಜಾ, 9 ಮೊಬೈಲ್, 10-ಸಿಮ್ ಕಾರ್ಡ್, 1-ಲ್ಯಾಪ್ ಪ್ಟಾಪ್, 1 ಗೂಡ್ ಆಟೋ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಜು.12 ರಂದು ಕಾಟನ್ ಪೇಟೆ ಪೊಲೀಸರಿಗೆ ಬಂದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾಟನ್ ಪೇಟೆಯ ಪಶುವೈದ್ಯ ಆಸ್ಪತ್ರೆಯ ಹಿಂಭಾಗದಲ್ಲಿ ಗೂಡ್ಸ್ ಆಟೋವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಗೂಡ್ಸ್ ಆಟೋ ಸಮೇತ ಇಬ್ಬರನ್ನು ಬಂಧಿಸಲಾಗಿದೆ ಗೂಡ್ಸ್ ಆಟೋವನ್ನು ಪರಿಶೀಲಿಸಿದಾಗ ನಿಷೇದಿತ ಮಾದಕ ವಸ್ತುವಾದ 53.5 ಕೆ.ಜಿ ಗಾಂಜಾವಿರುವುದು ಪತ್ತೆಯಾಗಿದೆ.
ಆರೋಪಿಗಳನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಬಸ್ ಮತ್ತು ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ಸಾಗಾಣೆ ಮಾಡಿಸಿಕೊಂಡು, ನಂತರ ದೆಹಲಿ, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಇತರೆ ನಾಲ್ವರು ಸಹಚರರ ಜೊತೆ ಸೇರಿಕೊಂಡು, ಸಾಗಾಣೆ/ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ತನಿಖೆಯನ್ನು ಮುಂದುವರೆಸಿ ಓರ್ವನನ್ನು ವೈಟ್ ಫೀಲ್ಡ್ನಲ್ಲಿ ಬಂಧಿಸಿ ಮತ್ತೋರ್ವ ನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಆರೋಪಿಗಳಲ್ಲಿ ಶಂಕರ್ ಲಾಲ್ ಗೂಡ್ಸ್ ಆಟೋ ಚಾಲಕನಾಗಿದ್ದರೆ,ಅನಿರುದ್ಧ ದಲೈ ಕೂಲಿ ಕೆಲಸ ಮಾಡುತ್ತಿದ್ದ,ಉಳಿದ ಮೂವರು ಶೇರ್ ಮಾರ್ಕೆಟಿಂಗ್ ಏಜೆಂಟ್ ಕಾರ್ಗೋ ಟ್ರಾನ್ಸ್ ಪೋರ್ಟ್ ಕೋರಿಯರ್ ಇನ್ಚಾರ್ಜ್ ,ಕಾಗೋ ಮೂದರ್ಸ್ನ ಸೂಪರ್ ವೈಸರ್, ಕೆಲಸಮಾಡುತ್ತಿದ್ದರೆ, ಮತ್ತೋರ್ವ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದ ಎಂದು ಹೇಳಿದರು.
ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾರ್ಗದರ್ಶನದಲ್ಲಿ ಕಾಟನ್ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಯರಿಸ್ವಾಮಿ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಮೀಷನರ್ ತಿಳಿಸಿದರು.



