ಸಂಸತ್ ಭವನದ ಮುಂದೆ ಬೆಂಕಿ ಹಚ್ಚಿಕೊಂಡಿದ್ದ 26 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ದೆಹಲಿಯ ಹೊಸ ಸಂಸತ್ ಭವನದ ಮುಂದೆ ಡಿಸೆಂಬರ್ 25ರಂದು ಬೆಂಕಿ ಹಚ್ಚಿಕೊಂಡಿದ್ದ ಉತ್ತರ ಪ್ರದೇಶದ ಬಾಗ್ಪತ್ನ ಜಿತೇಂದ್ರ ಶುಕ್ರವಾರ ಮೃತಪಟ್ಟಿದ್ದಾನೆ.
ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಿತೇಂದ್ರನನ್ನು ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೈತುಂಬಾ ಸುಟ್ಟಗಾಯವಾಗಿದ್ದ ಜಿತೇಂದ್ರ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ಅಸುನೀಗಿದ್ದಾನೆ.
ಸಂಸತ್ತಿನ ಬಳಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಸಹಾಯದಿಂದ ಬೆಂಕಿ ನಂದಿಸಿ ಜಿತೇಂದ್ರನನ್ನು ಕಾಪಾಡಲಾಗಿತ್ತು.
ಆರಂಭಿಕ ತನಿಖೆಗಳ ಪ್ರಕಾರ, ಬಾಗ್ಪತ್ನಲ್ಲಿ ಮನೆಯಲ್ಲಿ ವಿವಾದದ ಕಾರಣದಿಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಕುಟುಂಬ ಗ್ರಾಮದಲ್ಲಿ ಎರಡು ಹಲ್ಲೆ ಪ್ರಕರಣವನ್ನು ಎದುರಿಸುತ್ತಿದೆ. ಆಸ್ಪತ್ರೆ ವೈದ್ಯರ ಪ್ರಕಾರ ದೇಹವು ಶೇ.95ರಷ್ಟು ಭಾಗ ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಜಿತೇಂದ್ರ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.



