ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣದ ಲೂಟಿ ಕುಂಭಮೇಳದಲ್ಲೇ ಗರಿಷ್ಠ ಪ್ರಮಾಣದಲ್ಲಿ ನಡೆದಿದೆ ಎಂಬ ಆಘಾತಕಾರಿ ವಿಷಯ ಎಸ್ ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಹಣ ದುರುಪಯೋಗ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಒಂದೊಂದೇ ಹೊಸ ವಿಷಯಗಳು ಹೊರಬರುತ್ತಿವೆ. ಕಳೆದ ವರ್ಷದ ಜನವರಿಯಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ದೇವಾಲಯದಿಂದ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇಡೀ ವಂಚನೆಯ ಹಿಂದೆ ಬ್ಯಾಂಕಿಂಗ್ ಏಜೆನ್ಸಿಯೊಂದರ ಮೂಲಕ ಮಂದಿರದ ನಗದು ಎಣಿಕೆ ವಿಭಾಗಕ್ಕೆ ಸೇರಿದ್ದ ಅನುಕಲ್ಪ್ ಮಿಶ್ರಾ (20) ಮತ್ತು ಆತನ ಮೈದುನ ಲವಕುಶ್ ಮಿಶ್ರಾ (27) ಎಂಬ ಭಾವ-ಮೈದುನರ ಜೋಡಿ ಮಾಸ್ಟರ್ಮೈಂಡ್ ಕೆಲಸ ಮಾಡಿರುವುದು ಪತ್ತೆಯಾಗಿದೆ. ಮಂದಿರಕ್ಕೆ ಬಂದಿದ್ದ ಸುಮಾರು 7 ಕೋಟಿ ರೂಪಾಯಿ ದೇಣಿಗೆಯನ್ನು ಈ ಜಾಲ ವ್ಯವಸ್ಥಿತವಾಗಿ ಲೂಟಿ ಮಾಡಿರುವುದು ಪತ್ತೆಯಾಗಿದೆ.
ಕುಂಭಮೇಳದಲ್ಲಿ ದೇಶ-ವಿದೇಶಗಳಿಂದ 50 ಕೋಟಿಗೂ ಅಧಿಕ ಭಕ್ತರು ಆಗಮಿಸಿದ್ದರು. ಕುಂಭಮೇಳ ನಡೆಯು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ ಭಕ್ತರು ಹೊಸದಾಗಿ ತಲೆ ಎತ್ತಿದ್ದ ಅಯೋಧ್ಯೆ ರಾಮಮಂದಿರಕ್ಕೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಈ ವೇಳೆ ದೇಣಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆಯಲು ಆರೋಪಿಗಳು ಸಂಚು ರೂಪಿಸಿದ್ದರು.
ಮಹಾಕುಂಭ ಮೇಳ ಮತ್ತು ಅದರ ಹಿಂದೆ ಮುಂದೆ ದೇಗುಲಕ್ಕೆ ಅಪಾರ ಪ್ರಮಾಣದ ಭಕ್ತರು ಭೇಟಿ ನೀಡಿದ್ದಾರೆ. ಹಾಗಾಗಿ, ಕಾಣಿಕೆ ಪ್ರಮಾಣವು ಸಹ ಹೆಚ್ಚಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿಗಳು ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ತಿಂಗಳುಗಳಿಂದ ದೇಣಿಗೆ ಕಳವು ನಡೆಯುತ್ತಿದ್ದರೂ ಮಹಾಕುಂಭದ ಸಮಯದಲ್ಲಿ ಗರಿಷ್ಠ ಪ್ರಮಾಣದ ಕಳವು ನಡೆದಿದ್ದು, ಆರೋಪಿಗಳಾದ ಲವಕುಶ್ ಮಿಶ್ರಾ ಮತ್ತು ಆತನ ಸೋದರ ಸಂಬಂಧಿ ಅನುಕಲ್ಸ್ ಮಿಶ್ರಾ ಅತಿ ಹೆಚ್ಚು ಹಣವನ್ನು ಕದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕದ್ದ ಹಣದಿಂದ ಈ ಇಬ್ಬರೂ ಸಂಪಾದಿಸಿರುವ ಚರಾಸ್ಥಿ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಹಣದ ಸಾಗಣೆ ಮತ್ತಿತರ ಮಾಹಿತಿಗೆ ಪೊಲೀಸರು ಆದಾಯ ತೆರಿಗೆ ಇಲಾಖೆ ಮತ್ತಿತರ ಕೇಂದ್ರದ ಏಜೆನ್ಸಿಗಳನ್ನು ಸಂಪರ್ಕಿಸುವ ನಿರೀಕ್ಷೆ ಇದೆ.
ದೇಣಿಗೆ ಕಳವು ಪ್ರಕರಣದ 8 ಆರೋಪಿಗಳ ಪೈಕಿ ಲವಕುಶ್ ಮತ್ತು ಅನುಕಲ್ಸ್ ಸಹ ಇದ್ದಾರೆ. ಸದ್ಯ, ಬಂಧಿತ ಈ ಎಂಟೂ ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಲವಕುಶ್ ಮಿಶ್ರಾಗೆ ಸೇರಿದ ಅಯೋಧ್ಯೆ ಜಿಲ್ಲೆಯ ಮೀನಾಪುರ ಠಾಕುರನ್ ಫಗೌಲಿ ಹಳ್ಳಿಯಲ್ಲಿ ಪೊಲೀಸರು ಈ ಹಿಂದೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಆತನ ಮನೆಯಲ್ಲಿ ₹12 ಲಕ್ಷ ನಗದು ವಶಪಡಿಸಿಕೊಂಡಿದ್ದರು. ಮಿಶ್ರಾ ಸೋದರ ಸಂಬಂಧಿ ಅನುಕಲ್ಸ್ ಮಿಶ್ರಾ ಫಾರ್ಮ್ ಹೌಸ್ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದದ್ದು ಬಯಲಾಗಿದೆ.



