ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಸಿಬಿ ತಂಡದ ಸಂಭ್ರಮದಲ್ಲಿ ಮೃತಪಟ್ಟವರೆಲ್ಲರೂ ಮಕ್ಕಳು ಮತ್ತು ಯುವಕ-ಯುವತಿಯರು. ಅವರ ಕುಟುಂಬಗಳ ಕಣ್ಣೀರು ನೋಡಲು ಆಗುತ್ತಿಲ್ಲ ಎಂದು ಭಾವೋದ್ವೇಗಕ್ಕೆ ಒಳಗಾದರು.
ದುರಂತದ ಬಗ್ಗೆ ಕೆಲವು ಮಾಧ್ಯಮದವರು ಮೊದಲು ಮಾಹಿತಿ ನೀಡಿದರು. ನಂತರ ಕಮಿಷನರ್ ಮಾಹಿತಿ ನೀಡಿದರು. ನಮ್ಮಿಂದ ತಪ್ಪಾಗಿದೆ. ಈ ಘಟನೆಯಿಂದ ಪಾಠ ಕಲಿತಿದ್ದೇವೆ ಎಂದು ಅವರು ಹೇಳಿದರು.
ಅವರಿನ್ನು ಚಿಕ್ಕ ಮಕ್ಕಳು ನನ್ನ ಕಣ್ಣ ಮುಂದೆಯೇ ಸುಮಾರು 10 ಮಂದಿ ಯುವಕರು ಮತ್ತು ಮಕ್ಕಳು ಮೃತಪಟ್ಟವು. ಮಕ್ಕಳನ್ನು ಕಳೆದುಕೊಂಡ ಅವರ ತಾಯಿಯ ಮಾತುಗಳು ಕೇಳಿದರೆ ನೋವಾಗಲ್ವಾ? ಈ ನಷ್ಟವನ್ನು ಯಾರೂ ಕೂಡ ತುಂಬಿಕೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿಧಾನಸೌಧ ಮೆಟ್ಟಿಲ ಮೇಲೆ ನಾವು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಮಳೆಯ ಕಾರಣ 10 ನಿಮಿಷದಲ್ಲಿಯೇ ಮುಗಿಸಿದೆವು. ಅಲ್ಲಿ ಯಾವುದೇ ತೊಂದರೆ ಆಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ ಕೂಡಲೇ ಕಾರ್ಯಕ್ರಮ ನಿಲ್ಲಿಸಿ ಘಟನಾ ಸ್ಥಳಕ್ಕೆ ದೌಡಾಯಿಸಿದೆ ಎಂದು ಅವರು ವಿವರಿಸಿದರು.
ವಿರೋಧ ಪಕ್ಷಗಳು ಕಾಲ್ತುಳಿತ ಘಟನೆಗೆ ಸರ್ಕಾರವೇ ಹೊಣೆ ಎಂದು ಆರೋಪ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡುತ್ತಿವೆ. ಮಾತನಾಡುವವರು ಮಾತನಾಡಲಿ ಬಿಡಿ. ಅವರವರ ಕಾಲದಲ್ಲಿ ಏನಾಗಿದೆ ಎಂಬುದು ನನಗೂ ಗೊತ್ತು. ರಾಜ್ ಕುಮಾರ್ ನಿಧನರಾದಾಗ ಏನಾಗಿತ್ತು ಎಲ್ಲರಿಗೂ ಗೊತ್ತಿದೆ ಎಂದು ಅವರು ಪರೋಕ್ಷವಾಗಿ ವಿರೋಧಪಕ್ಷಗಳಿಗೆ ತಿರುಗೇಟು ನೀಡಿದರು.



