ಚಿಕ್ಕಬಳ್ಳಾಪುರ ಸಂಸದ ಹಾಗೂ ಮಾಜಿ ಸಚಿವ ಸುಧಾಕರ್ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕನಾಗಿದ್ದ ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಬಾಬು (32) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಸಾವಿಗೆ ಸಂಸದ ಡಾ ಕೆ ಸುಧಾಕರ್ ಕಾರಣ. ಚಿಕ್ಕಕಾಡಿಗಾನಹಳ್ಳಿ ನಾಗೇಶ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರು ವಂಚಿಸಿದ್ದಾರೆ ಎಂದು ಡೆತ್ ನೋಟ್ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಕಾರು ಚಾಲಕ ನನ್ನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುವುದು ರಾಜಕೀಯ ಪ್ರೇರಿತ ಎಂದು ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಚಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ರಾಜಕೀಯ ಒತ್ತಡವಿಲ್ಲದೆ ತನಿಖೆ ಆಗಲಿದೆ ಎಂದು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬೆಳಿಗ್ಗೆ ಮಾಹಿತಿ ಬಂದಿದೆ. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ತನ್ನ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಬರೆದಿದ್ದಾರೆ. ಸಂಸದ ಸುಧಾಕರ್ ಮೇಲೆ ಆರೋಪ ಮಾಡಿದ್ದಾರೆ. ಎಂಪಿ ಅವರ ಅನುಯಾಯಿ ನಾಗೇಶ್, ಮಂಜುನಾಥ್ ಕಾರಣ ಎಂದು ಪತ್ರ ಹೆಸರು ಉಲ್ಲೇಖಿಸಿದ್ದಾರೆ. ಯಾರೇ ಆಗಲಿ ಕಾನೂನು ಕ್ರಮ ತೆಗೆದುಕೊಳ್ತೀವಿ ಎಂದರು.
ಇದು ಗಂಭೀರ ಆರೋಪ. ಕೆಲಸ ಕೊಡಿಸೋದಾಗಿ ಹಣ ಪಡೆದಿದ್ದಾರೆ. ಇದು ಸಂಪೂರ್ಣ ತನಿಖೆ ಆಗಬೇಕು. ಕಾನೂನು ರೀತಿ ಕ್ರಮ ತೆಗೆದುಕೊಳ್ತೀವಿ. ಡೆತ್ನೋಟ್ನಲ್ಲಿ ಎಂಪಿ ಸುಧಾಕರ್ ಅವರ ಹೆಸರು ಇದೆ. ತನಿಖೆ ಆಗಲಿ. ಅವರ ಕುಟುಂಬದವರು ಏನು ಹೇಳುತ್ತಾರೆ ಅದೆಲ್ಲದರ ತನಿಖೆ ಆಗಲಿ. ಪಾರದರ್ಶಕ ತನಿಖೆ ಆಗುತ್ತದೆ. ಚಾಲಕ ಬಾಬು ಎಸ್ಸಿ ಸಮುದಾಯಕ್ಕೆ ಸೇರಿದ ಯುವಕ. ಸಮಗ್ರ ತನಿಖೆ ಆಗುತ್ತದೆ. ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.



