ಅಪಘಾತದಲ್ಲಿ 9 ಮಂದಿ ಮೃತಪಟ್ಟ ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಸಚಿವರನ್ನು 1 ಕಿ.ಮೀ. ದೂರದವರೆಗೆ ಬೆನ್ನಟ್ಟಿ ಹಲ್ಲೆ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶರವಣ್ ಕುಮಾರ್ ಹಾಗೂ ಸ್ಥಳೀಯ ಶಾಸಕರ ಜೊತೆ ಕಳೆದ ವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಂತೈಸಲು ಹೋದಾಗ ಈ ಘಟನೆ ನಡೆದಿದೆ.
ಜೋಗಿಪುರದ ಮಾಳವನ್ ಗ್ರಾಮಕ್ಕೆ ಬುಧವಾರ ಬೆಳಿಗ್ಗೆ ಸಚಿವರು ಹಾಗೂ ಶಾಸಕರು ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ್ದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ಸಂತ್ರಸ್ತ ಕುಟುಂಬದವನ್ನು ಭೇಟಿ ಮಾಡಲು ತಡ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಅಪಘಾತದಲ್ಲಿ 9 ಮಂದಿ ಮೃತಪಟ್ಟು ವಾರ ಕಳೆದರೂ ಯಾರೂ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿರಲಿಲ್ಲ. ಅಲ್ಲದೇ ಯಾವುದೇ ಪರಿಹಾರ ಮೊತ್ತ ಘೋಷಿಸದೇ ಸರ್ಕಾರ ಹಾಗೂ ಸ್ಥಳೀಯ ನಾಯಕರು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಚಿವರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಸ್ಥಳೀಯ ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಸಮಯಪ್ರಜ್ಞೆ ಮೆರೆದ ಸಚಿವರ ಆಪ್ತ ರಕ್ಷಕರು ಕೂಡಲೇ ಅವರನ್ನು ಸ್ಥಳದಿಂದ ಕರೆದೊಯ್ದು ಯಾವುದೇ ಗಾಯವಾಗದಂತೆ ನೋಡಿಕೊಂಡರು. ಆದರೆ ಈ ಘಟನೆ ವೇಳೆ ಸಚಿವರ ಅಂಗರಕ್ಷಕನಿಗೆ ಗಾಯವಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಮ್ಮ ಬೆಂಬಲಿಗ ವಾಹನದೊಂದಿಗೆ ಸಚಿವರು ಕಾರಿನಲ್ಲಿ ಸ್ಥಳದಿಂದ ಕಾಲ್ಕೀಳುತ್ತಿದ್ದಂತೆ ಗ್ರಾಮಸ್ಥರು ಸುಮಾರು 1 ಕಿ.ಮೀ. ದೂರದವರೆಗೆ ಬೆಂಬತ್ತಿ ಹಲ್ಲೆಗೆ ಮುಂದಾಗಿದ್ದರು. ಸಚಿವರಿಗೆ ಭದ್ರತೆ ಒದಗಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಘಟನೆ ಸರ್ಕಾರದ ನಿರ್ಲಕ್ಷ್ಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಪ್ರಶಾಂತ್ ಕಿಶೋರ್, ಜೆಡಿಯು ಸೇರಿದಂತೆ ಹಲವು ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.



