ಐತಿಹಾಸಿಕ ದೆಹಲಿಯ ಕೆಂಪು ಕೋಟೆಯಲ್ಲಿ 1.5 ಕೋಟಿ ರೂ. ಮೌಲ್ಯದ ಎರಡು ಚಿನ್ನದ ಕಳಶಗಳನ್ನು ವೇಷಧಾರಿ ಅರ್ಚಕ ಕದ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೆಂಪುಕೋಟೆ ಆವರಣದದಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 9ರವರೆಗೆ ನಡೆಯುತ್ತಿರುವ ಪಾರ್ಕ್ನಲ್ಲಿ ʻದಶಲಕ್ಷಣ ಮಹಾಪರ್ವʼ ಜೈನ ಧರ್ಮಿಯರ ಧಾರ್ಮಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಗಳು ಇದೀಗ ವೈರಲ್ ಆಗಿವೆ.
ಅರ್ಚಕನ ವೇಷದಲ್ಲಿ ಬಂದ ಕಳ್ಳ ಚಿನ್ನದ ಜರಿ (ಕಲಶ), ಸುಮಾರು 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ (ಕಲಸದ ಮೇಲಿಡುವ ತೆಂಗು ಮಾದರಿ ವಸ್ತು), ವಜ್ರಗಳು, ರತ್ನ ಹಾಗೂ ಮಾಣಿಕ್ಯಗಳಿಂದ ಕೂಡಿದ ಸಣ್ಣ ಗಾತ್ರದ 115 ಗ್ರಾಂ ಚಿನ್ನದ ಕಲಶ ಕದ್ದು ಪರಾರಿಯಾಗಿದ್ದಾನೆ.
ಕಳುವಾದ ವಸ್ತುಗಳು ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿವೆ. ಪ್ರತಿದಿನ ಅವರು ಆಚರಣೆಗಳಿಗಾಗಿ ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದರು ಎನ್ನಲಾಗಿದೆ. ಕಳ್ಳ ಅರ್ಚಕನನ್ನ ಗುರುತಿಸಿದ್ದು. ಶೀಘ್ರದಲ್ಲೇ ಆತನನ್ನ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಂಪುಕೋಟೆ ಆವರಣದಲ್ಲಿರುವ ಪಾರ್ಕ್ನಲ್ಲಿ ಆಗಸ್ಟ್ 15ರಂದು ಆರಂಭವಾದ ʻದಶಲಕ್ಷಣ ಮಹಾಪರ್ವʼ ಧಾರ್ಮಿಕ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಶೇಷ ಅತಿಥಿಯಾಗಿ ಆಗಮಿಸಿದ್ದಾಗಲೇ ಕಳ್ಳತನ ನಡೆದಿದೆ.
ಜೈನ ಅರ್ಚಕನ ವೇಷದಲ್ಲಿ ಬಂದ ವ್ಯಕ್ತಿ ಬೆಲೆ ಬಾಳುವ ವಸ್ತುಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಆಯೋಜಕರು ಗಣ್ಯರನ್ನು ಸ್ವಾಗತಿಸುವ ಭರದಲ್ಲಿದ್ದಾಗ ವ್ಯಕ್ತಿ ವಸ್ತುಗಳನ್ನ ದೋಚಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಲಶವು ಕೇವಲ ಆರ್ಥಿಕ ಮೌಲ್ಯ ಮಾತ್ರವಲ್ಲದೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿತ್ತು. ಇಂತಹ ಘಟನೆಯು ಜೈನ ಸಮುದಾಯಕ್ಕೆ ಆಘಾತಕಾರಿಯಾಗಿದೆ. ಕೆಂಪು ಕೋಟೆಯಂತಹ ಸ್ಥಳದಲ್ಲಿ ಇದು ಸಂಭವಿಸಿರುವುದು ಆತಂಕಕಾರಿಯಾಗಿದೆ. ಪೊಲೀಸರು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಕಲಶ ವಾಪಸ್ ಪಡೆಯಬೇಕು ಎಂದು ಜೈನ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.


