ಬೆಂಗಳೂರು: ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ನಡೆದ ಅಹಿತಕರ ಘಟನೆ ಕುರಿತು ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದರು.
ಮದ್ದೂರು ಘಟನೆಯನ್ನು ಕೋಮುಗಲಭೆಗೆ ಹೋಲಿಸಿ ಪ್ರಚೋದಿಸುವುದು ಸರಿಯಲ್ಲ. ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ. ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬುದನ್ನೂ ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಸಮಾಜವಿದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಬಿಜೆಪಿ, ಜೆಡಿಎಸ್ನವರು ರಾಜಕೀಯವಾಗಿ ನಮ್ಮನ್ನು ಎದುರಿಸಲು ಆಗದೇ ಪ್ರಚೋದನೆ ಮಾಡುತ್ತಿದ್ದಾರೆ. ನಾವು ಯಾರ ಓಲೈಕೆಯನ್ನ ಕೂಡ ಮಾಡುತ್ತಿಲ್ಲ. ಹಾಗಿದ್ರೆ ಯಾಕೆ 21 ಜನರ ಬಂಧನ ಮಾಡುತ್ತಿದ್ದೆವು? ಇದು ಪೂರ್ವನಿಯೋಜಿತ, ನಮಗೆ ಎಲ್ಲ ಗೊತ್ತಿದೆ. ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ ನಮಗೆ. ನಾಗಮಂಗಲದಲ್ಲೂ ನಡೆಸಿದ್ರು, ಈ ಸಲ ಎಚ್ಚರಿಕೆ ವಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.



