ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂಕೋರ್ಟ್ ನಲ್ಲೂ ವಜಾಗೊಂಡಿದೆ.
ಬೆಂಗಳೂರು ಮೂಲದ ಗೌರವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದ ಸಾಹಿತಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದು ಖಚಿತವಾಗಿದೆ.
ಮೈಸೂರು ದಸರಾ ಹಿಂದೂಗಳ ಸಂಪ್ರದಾಯವಾಗಿದ್ದು, ಮುಸ್ಲಿಂ ಸಮುದಾಯದ ಬಾನು ಮುಷ್ತಾಕ್ ಉದ್ಘಾಟನೆಗೆ ಅವಕಾಶ ನೀಡಬಾರದು. ಮೈಸೂರು ದಸರಾದಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ, ಆರತಿ ಮುಂತಾದ ಸಂಪ್ರದಾಯಗಳು ನಡೆಯುತ್ತವೆ ಎಂದು ಗೌರವ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಗೌರವ್, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಗೌರವ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದೆ ಮುಸ್ಲಿಂ ಸಮುದಾಯದ ನಿಸಾರ್ ಅಹಮದ್ ಸೇರಿದಂತೆ ಹಲವು ಮುಸ್ಲಿಮ್ ಸಮುದಾಯದ ಗಣ್ಯರು ದಸರಾ ಉದ್ಘಾಟಿಸಿದ್ದರು. ಆಗ ಮಾಡದ ವಿರೋಧ ಈಗ ಯಾಕೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು.
ಅರ್ಜಿ ಸಲ್ಲಿಸುವ ಔಚಿತ್ಯ ಏನಿತ್ತು? ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದೀರಿ? ಹಿಂದೆ ಮುಸ್ಲಿಮ್ ಸಮುದಾಯದವರು ದಸರಾ ಉದ್ಘಾಟನೆ ಮಾಡಿದ್ದು ನಿಮಗೆ ಗೊತ್ತಿರಲಿಲ್ಲವೇ? ಎಂದು ನ್ಯಾಯಾಲಯ ಖಾರವಾಗಿ ಪ್ರಶ್ನಿಸಿತು.



