ಜೈಲಿನಿಂದ ಇತ್ತೀಚೆಗಷ್ಟೇ ಹೊರಗೆ ಬಂದು ಊರಿಗೆ ಹೋಗದೇ ಅಲೆಯುತ್ತಿದ್ದ ಕುಡುಕ ಬಲೂನು ಮಾರಲು ಮೈಸೂರು ದಸರಾಗೆ ಬಂದಿದ್ದ 10 ವರ್ಷದ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮೈಸೂರು ದಸರಾ ಮುಗಿಯುತ್ತಿದ್ದಂತೆ ಆಟೋ ಚಾಲಕನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಲೆಗೈದ ಘಟನೆ ಬೆನ್ನಲ್ಲೇ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದ್ದು, ಎರಡೂ ಪ್ರಕರಣಗಳು ಅರಮನೆ ಸುತ್ತಮುತ್ತ ನಡೆದಿರುವುದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ.
ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಬಂದಿವೆ. ಬುಧವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಅಪ್ರಾಪ್ತೆಯ ಹತ್ಯೆಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣಾ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದಾರೆ. ರೆಡ್ ಶರ್ಟ್, ಜೀನ್ಸ್ ಪ್ಯಾಂಡ್ ಧರಸಿದ್ದ ಕೊಲೆ ಆರೋಪಿಯ ಫೋಟೋ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಕೃತ್ಯ ಎಸಗುವ ವೇಳೆ ಆರೋಪಿ ಕಾಲಿಗೆ ಚಪ್ಪಲಿ ಕೂಡ ಧರಿಸಿರಲಿಲ್ಲ ಎಂಬುದೂ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೊತ್ತಾಗಿದೆ.
ಫೋಟೋ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯ ಹಿನ್ನೆಲೆಯನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎಂದು ಗುರುತಿಸಲಾಗಿದೆ. 2 ವರ್ಷ ಜೈಲು ವಾಸ ಅನುಭವಿಸಿದ್ದ ಕಾರ್ತಿಕ್ 4 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಊರು ಸೇರದೇ ಎಲ್ಲೆಂದರಲ್ಲಿ ಕುಡಿದು ಅಲೆಯುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವಿಚಾರಣೆಗಾಗಿ ವ್ಯಾಪಾರಕ್ಕೆ ಆಗಮಿಸಿದ್ದ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನ ಪೊಲೀಸರು ಕರೆದೊಯ್ದಿದ್ದಾರೆ. ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



