ಬೆಂಗಳೂರು: ಮಳೆ ಕೊರತೆಯಿಂದ ಉದ್ಭವಿಸಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಗುರುವಾರ ತುರ್ತು ಸಭೆ ಕರೆದಿದೆ.
ಮಳೆ ಕೊರತೆಯಿಂದ ಉದ್ಭವಿಸಿರುವ ಬರಗಾಲ ಸನ್ನಿವೇಶದ ನಡುವೆಯೂ 15 ದಿನಗಳ ಕಾಲ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಲು ಕರ್ನಾಟಕ ನಿರಾಕರಿಸಿದೆ. ಮತ್ತೊಂದೆಡೆ ತಮಿಳುನಾಡು ನೀರು ಬಿಡಲು ಪಟ್ಟು ಹಿಡಿದಿದೆ.
ನದಿ ನೀರು ವಿವಾದದ ಹಿನ್ನೆಲೆಯಲ್ಲಿ ಗುರುವಾರ ನವದೆಹಲಿಯಲ್ಲಿ 54ನೇ ತುರ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಲಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿಗೆ ತಡೆಯಾಜ್ಞೆ ನೀಡಲು ಕರ್ನಾಟಕ ಮೇಲ್ಮನವಿ ಮನವಿ ಸಲ್ಲಿಸಿದೆ. ಅಲ್ಲದೇ ಈ ಬಗ್ಗೆ ಕಾನೂನು ಹೋರಾಟ ನಡೆಸುವ ಕುರಿತು ತಜ್ಞರ ಜೊತೆ ಸಭೆ ನಡೆಸಿದೆ.
ಬೆಂಗಳೂರು-ತಮಿಳುನಾಡಿಗೆ ಕರ್ನಾಟಕದಿಂದ ಮುಂದಿನ 15 ದಿನಗಳ ಕಾಲ 3.500_ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿರುವ ಬೆನ್ನಲ್ಲೇ, ಗುರುವಾರ ಮಹತ್ವದ ತುರ್ತು ಸಿಡಬ್ಲ್ಯೂ ಎಂಎ ಸಭೆ ನಡೆಯಲಿದೆ.
ನವದೆಹಲಿಯಲ್ಲಿ ಗುರುವಾರ ಮಧ್ಯಾಹ್ನ 2:30ಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಲಿದ್ದು, ಕರ್ನಾಟಕ, ತಮಿಳುನಾಡು, ಮತ್ತು ಪಾಂಡಿಚರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಹಿಂದೆ ನಡೆದಿದ್ದ ಸಭೆಯಲ್ಲಿ ಸಿಡಬ್ಲ್ಯೂ ಆರ್ಸಿ, ಕರ್ನಾಟಕಕ್ಕೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಶಿಫಾರಸು ಮಾಡಿತ್ತು.
ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಕರ್ನಾಟಕ ಸರ್ಕಾರ ವ್ಯಕ್ತಪಡಿಸಿತ್ತು.
ಸಮಿತಿ ನೀಡಿರುವ ಶಿಫಾರಸ್ಸನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣ ಪ್ರಾಧಿಕಾರಕ್ಕೆ ಸಲ್ಲಿಸಲು ಮುಂದಾಗಿದೆ.
ಈಗಾಗಲೇ ಭಾರಿ ಮತ್ತು ಮಧ್ಯಮ ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಕಾನೂನು ತಜ್ಞರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ಕಾನೂನು ಹೋರಾಟಗಳ ಬಗ್ಗೆ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.
ಗುರುವಾರ ನಡೆಯಲಿರುವ ಸಭೆಯಲ್ಲಿ ಕರ್ನಾಟಕ ರಾಜ್ಯದ ಪ್ರಸ್ತುತ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಸಾಮರ್ಥ್ಯ, ಹಾಗೂ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ತಡೆಯಾಜ್ಞೆ ನೀಡಬೇಕೆಂದು ಕೋರಲಿದೆ.
ಈ ಸಂಬಂಧ ಈಗಾಗಲೇ ಕಾನೂನು ತಜ್ಞರು ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಮೇಲ್ಮನೆ ಸಲ್ಲಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇದೀಗ ಗುರುವಾರ ನಡೆಯಲಿರುವ ಸಭೆಯು ಎಲ್ಲರ ಚಿತ್ತ ನೆಟ್ಟಿದ್ದು ಕರ್ನಾಟಕದ ಮನವಿಯನ್ನು ಪುರಸ್ಕರಿಸಿ ಸಮಿತಿಯ ಶಿಫಾರಸಿಗೆ ನಿರ್ವಹಣಾ ಪ್ರಾಧಿಕಾರ ತಡೆಯಾಜ್ಞೆ ನೀಡಲಿದೆಯೇ ಎಂಬ ಯಕ್ಷಪ್ರಶ್ನೆ ಮೂಡಿದೆ.



