ಬೆಂಗಳೂರು: ಕೆಲಸದ ಅವಧಿಯಲ್ಲಿ ನೆಲಮಂಗಲದ ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯದ ಪಾರ್ಟಿ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಮಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಹಾಗೂ ಇಬ್ಬರು ಕಾರ್ಯದರ್ಶಿಗಳನ್ನು ಅಮಾನತು ಮಾಡಲಾಗಿದೆ.
ಸಸ್ಪೆಂಡ್ ಆದ ಅಧಿಕಾರಿಗಳು ಕಳೆದ ಶುಕ್ರವಾರ ಕರ್ತವ್ಯದ ಸಮಯದಲ್ಲಿ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದ ತಪ್ಪಲಿನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು 24 ಗಂಟೆಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.
ಅಧಿಕಾರಿಗಳ ವರದಿ ಆಧಾರದ ಮೇರೆಗೆ 8 ಮಂದಿಯನ್ನು ಅಮಾನತು ಮಾಡಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ( ಸಿಇಒ) ವಾಸಂತಿ ಅಮರ್ ಆದೇಶಿಸಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವಗಂಗೆ ಗ್ರಾಮ ಪಂಚಾಯತ್ನ ಗಿರೀಶ್; ಅಗಳಕುಪ್ಪೆ ಗ್ರಾ. ಪಂಚಾಯತ್ನ ಹರೀಶ್, ಗೊಲ್ಲಹಳ್ಳಿ ಗ್ರಾಮ ಪಂಚಾಯತ್ನ ಪ್ರಶಾಂತ್ ಡಿ, ಮಣ್ಣೆ ಗ್ರಾಮ ಪಂಚಾಯತ್ನ ಚಿರಂಜೀವಿ, ಸೋಂಪುರ ಗ್ರಾಮ ಪಂಚಾಯತ್ನ ರವಿಶಂಕರ್, ಬೆಟ್ಟಕೋಟೆ ಗ್ರಾಮ ಪಂಚಾಯತ್ನ ದಿನೇಶ್ ಬಿ.ಎಂ, ಅಗಳಕುಪ್ಪೆ ಗ್ರೇಡ್ 1 ಕಾರ್ಯದರ್ಶಿ ಕೆಂಪರಂಗಯ್ಯ, ಬೂದಿಹಾಲ್ ಗ್ರಾಮ ಪಂಚಾಯತ್ನ ಗ್ರೇಡ್ 2 ಕಾರ್ಯದರ್ಶಿ ಗಂಗಾಧರ್, ಸೋಂಪುರ ಗ್ರಾಮ ಪಂಚಾಯತ್ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜುನಾಥ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಪಾರ್ಟಿ ಮಾಡಿದ್ದ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಿ, ಕರ್ತವ್ಯ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿದ್ದರು.



