ಬೆಂಗಳೂರು: ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2025’ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ.
ಕಾರ್ಯಕ್ರಮವನ್ನು ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ. ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ.
ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ. ಇನ್ನು ಈ ಬಾರಿಯ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗು ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದು ಇದರ ಮತ್ತೊಂದು ಆಕರ್ಷಣೆ. ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವದರಲ್ಲಿ ಎರಡು ಮಾತಿಲ್ಲ.
ಜೀ಼ ಕನ್ನಡ ಅವಾರ್ಡ್ 2025 ರಲ್ಲಿ ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಜೀ಼ ಕನ್ನಡ ಅವಾರ್ಡ್ ನಲ್ಲಿ ವಿಶೇಷವಾಗಿ “ವೀಕೆಂಡ್ ವಿತ್ ರಮೇಶ್ ಮಿನಿಯೇಚರ್” ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿತ್ತು.
ಜೀ ಕನ್ನಡ ಮತ್ತು ಕನ್ನಡ ಜೀ5 ನ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ “ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಇನ್ನು ಜೀ ಕನ್ನಡ 20 ವರುಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಕೊಡೋದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರುಷ ‘ನಾ ನಿನ್ನ ಬಿಡಲಾರೆ’, ‘ಕರ್ಣ’ ಮತ್ತು ‘ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಪ್ರಸಿದ್ಧ ಧಾರಾವಾಹಿಗಳ ಜೊತೆಗೆ ‘ನಾವು ನಮ್ಮವರು’ ಎಂಬ ವಿಭಿನ್ನ ರಿಯಾಲಿಟಿ ಶೋ ವನ್ನು ಜನರ ಮುಂದಿಟ್ಟಿದ್ದೇವೆ ಎಂದರು.
ಟೆಲಿವಿಷನ್ ಜೊತೆಗೆ OTT ಪ್ಲಾಟ್ಫಾರ್ಮ್ ಕನ್ನಡ ZEE5 “ನಮ್ಮ ಭಾಷೆ, ನಮ್ಮ ಕಥೆಗಳು” ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಸಪೋರ್ಟ್ ಮತ್ತು ಪ್ರೀತಿ ಅಭೂತಪೂರ್ಣ” ಎಂದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಶ್ರೀನಾಥ್, ಸುಧಾರಾಣಿ, ಪ್ರೇಮ, ನಾಗಾಭರಣ, ಯೋಗರಾಜ್ ಭಟ, ಡಾಲಿ ಧನಂಜಯ್, ರಚಿತಾ ರಾಮ್, ವಿಜಯ ರಾಘವೇಂದ್ರ, ಅದಿತಿ ಪ್ರಭುದೇವ, ಪೃಥ್ವಿ ಅಂಬರ್, ಮಾನ್ವಿತ ಹರೀಶ್, ಅಮೂಲ್ಯ, ರಿಷಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಸಪ್ತಮಿ ಗೌಡ , ಪ್ರಮೋದ್ ಶೆಟ್ಟಿ, ವಿಕ್ರಂ ರವಿಚಂದ್ರನ್ ಮತ್ತು ಅನೇಕ ಸ್ಯಾಂಡಲವುಡ್ ಕಲಾವಿದರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಅಷ್ಟೇ ಅಲ್ಲದೆ ಹಾಡಿನ ಮೂಲಕ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮಾಡಿರೋ ನಿರೂಪಣೆ ಎಲ್ಲರ ಗಮನ ಸೆಳೆಯಿತು



