ಪತ್ನಿಗೆ ಆರೋಗ್ಯ ಸಮಸ್ಯೆಯಿಂದ ಬೇಸತ್ತ ಪತಿ ಕೊಲೆ ಮಾಡಿ ಸಹಜ ಸಾವು ಎಂಬಂತೆ ಬಿಂಬಿಸಲು ಹೋಗಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕೃತಿಕಾ ರೆಡ್ಡಿ ಎಂಬಾಕೆಯನ್ನು ವೈದ್ಯನಾಗಿರುವ ಪತಿ ಮಹೇಂದ್ರ ರೆಡ್ಡಿ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ.
ಮದುವೆಗೆ ಮುಂಚಿನಿಂದಲೂ ಕೃತಿಕಾ ರೆಡ್ಡಿಗೆ ಅಜೀರ್ಣ, ಗ್ಯಾಸ್ಟ್ರಿಕ್, ಲೋ ಶುಗರ್ ಸಮಸ್ಯೆ ಇತ್ತು. ಇದನ್ನು ಮದುವೆ ವೇಳೆ ಗಮನಕ್ಕೆ ತಾರದೇ ಮದುವೆ 2024 ಮೇ ತಿಂಗಳಲ್ಲಿ ಮಾಡಿಕೊಡಲಾಗಿತ್ತು.
ಮದುವೆ ಆದ 6 ತಿಂಗಳ ನಂತರ ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವುದನ್ನು ಅರಿತ ಮಹೇಂದ್ರ ರೆಡ್ಡಿ ಸಾಕಷ್ಟು ಪ್ರಯತ್ನದ ನಂತರವೂ ಪತ್ನಿಯ ಆರೋಗ್ಯ ಸುಧಾರಿಸಲು ಸಾಧ್ಯವಾಗದೇ ಕಾರಣ 11 ತಿಂಗಳ ನಂತರ ಕೊಲೆಗೆ ಸಂಚು ರೂಪಿಸಿದ್ದ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಹುಷಾರಿಲ್ಲದೆ ತವರುಮನೆಯಲ್ಲಿ ಕೃತಿಕಾರೆಡ್ಡಿ ಮಲಗಿದ್ದಾಗ ಅಲ್ಲಿಗೆ ಬಂದಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಮಹೇಂದ್ರ ರೆಡ್ಡಿ ಎರಡು ದಿನ ಇಂಜೆಕ್ಷನ್ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.
ಖಾಸಗಿ ಆಸ್ಪತ್ರೆ ವೈದ್ಯರು ಡೆತ್ ಮೆಮೋವನ್ನು ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು. ಕೃತಿಕಾರೆಡ್ಡಿ ಕುಟುಂಬದವರು ದೂರು ನೀಡಲು ಮುಂದಾಗಿದ್ದು, ಮನವೊಲಿಸಿದ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಿಕೊಟ್ಟಿದ್ದರು.
ಮರಣೋತ್ತರ ಪರೀಕ್ಷೆ ನಂತರ ವದರಿಯನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಲಾಗಿತ್ತು. ಎಫ್ ಎಸ್ ಎಲ್ ವರದಿಯಲ್ಲಿ ಅನಸ್ತೇಶಿಯಾ ನೀಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಯುಡಿಆರ್ ಆಗಿದ್ದ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ ಮಾರತ್ತಹಳ್ಳಿ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಮಣಿಪಾಲದಲ್ಲಿ ಬಂಧಿಸಿದ್ದಾರೆ.



