6 ಬಾರಿಯ ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಮೇರಿಕೋಮ್ 20 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ವಿಚ್ಛೇದನ ನೀಡಬೇಕಾಗಿ ಬಂದ ಜೀವನದ ಕರಾಳ ಮುಖವನ್ನು ಮೊದಲ ಬಾರಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಕರುಂಗ್ ಓಂಕ್ಲೋರ್ ಮದುವೆ ಆಗಿ ನಾಲ್ಕು ಮಕ್ಕಳನ್ನು ಹೊಂದಿರುವ ಮೇರಿಕೋಮ್ ಮದುವೆ ಆದ ಮೇಲೂ ಬಾಕ್ಸಿಂಗ್ ವೃತ್ತಿ ಮುಂದುವರಿಸಿದ್ದೂ ಅಲ್ಲದೇ ದೇಶದ ಸ್ಟಾರ್ ಕ್ರೀಡಾಪಟುವಾಗಿ ಹಲವಾರು ಮಹತ್ವದ ಸಾಧನೆಗಳನ್ನು ಮಾಡಿದ್ದರು. ಮೇರಿಕೋಮ್ ಸಾಧನೆಯ ಹಿಂದೆ ಪತಿಯ ಸಹಕಾರ ಎಂಬ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಆದರೆ ೨೦೨೩ರಲ್ಲಿ ಗಂಡನಿಂದ ದೂರವಾಗಲು ಮೇರಿ ಕೋಮ್ ನಿರ್ಧರಿಸಿ ವಿಚ್ಚೇದನ ಪಡೆದಿದ್ದರು.
ನನ್ನ ವಿಚ್ಚೇದನ ವಿಷಯ ಜಗತ್ತಿಗೆ ಹರಡುವುದು ನನಗೆ ಬೇಕಿರಲಿಲ್ಲ. ಹಾಗಾಗಿ ನಾವು ಪರಸ್ಪರ ಒಪ್ಪಂದದ ಮೇರೆಗೆ ದೂರವಾಗಲು ನಿರ್ಧರಿಸಿದೆವು ಎಂದು ಮೇರಿ ಕೋಮ್ ಹೇಳಿಕೊಂಡಿದ್ದಾರೆ.
ಗಂಡನಿಂದ ದೂರವಾಗುವ ಬಗ್ಗೆ ಎರಡೂ ಕುಟುಂಬಗಳು ಸಮ್ಮತಿ ಸೂಚಿಸಿದ್ದವು. ಎಲ್ಲವೂ ಸರಿಯಾಗಿದೆ ಎಂದುಕೊಂಡಾಗ ದಾಂಪತ್ಯ ಜೀವನ ಮುರಿದು ಬಿದ್ದ ಬಗ್ಗೆ ಕೆಲವೊಂದು ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ವದಂತಿಗಳು ಹರಡತೊಡಗಿದವು. ಈ ಬಗ್ಗೆ ಮೇರಿಕೋಮ್ ಪ್ರತಿಕ್ರಿಯೆ ನೀಡದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ನಾನು ವೃತ್ತಿಜೀವನದ ಕಡೆ ಹೆಚ್ಚು ಗಮನ ಹರಿಸಿ ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎಲ್ಲವೂ ಚೆನ್ನಾಗಿತ್ತು. ಹಣಕಾಸಿನ ಸ್ಥಿತಿ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಆದರೆ ೨೦೨೨ರ ಕಾಮನ್ ವೆಲ್ತ್ ಕ್ರೀಡಾಕೂಟದ ವೇಳೆ ಗಾಯಗೊಂಡು ನಾನು ಹಾಸಿಗೆ ಹಿಡಿದಾಗ ನಾನು ಇಷ್ಟು ದಿನ ಬದುಕಿದ್ದು ಸುಳ್ಳಿನ ಪ್ರಪಂಚದಲ್ಲಿ ಎಂಬುದು ಅರಿವಾಯಿತು ಎಂದು ಮೇರಿಕೋಮ್ ಹೇಳಿದ್ದಾರೆ.
ಹಾಸಿಗೆ ಹಿಡಿದು ಮೇಲೆ ಏಳಲು ಸಾಧ್ಯವಾಗದೇ ೬ ತಿಂಗಳು ಕಳೆದ ಮೇರಿಕೋಮ್ ನಂತರ ಕೆಲವು ತಿಂಗಳ ಕಾಲ ಆಸರೆ ಪಡೆದು ನಡೆಯುವ ಹಂತಕ್ಕೆ ತಲುಪಿದ್ದರು. ಈ ವೇಳೆ ಗಂಡನ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಮೇರಿಕೋಮ್ ೨೦೨೩ರಲ್ಲಿ ಗಂಡನಿಂದ ದೂರವಾಗಲು ನಿರ್ಧರಿಸಿದರು.
ನಾನು ಕಷ್ಟಪಟ್ಟು ಸಂಪಾದಿಸಿದ ಜಮೀನು, ಕೋಟ್ಯಂತರ ರೂಪಾಯಿ ಎಲ್ಲವೂ ಕಳೆದುಕೊಂಡಿದ್ದೆ. ಮಣಿಪುರದಲ್ಲಿ ನನ್ನ ಜಮೀನಿನ ಮೇಲೆ ಬ್ಯಾಂಕ್ ನಿಂದ ಸಾಲ ಪಡೆಯಲಾಗಿತ್ತು. ಸಾಲ ಮರುಪಾವತಿ ಮಾಡದ ಕಾರಣ ಆ ಜಮೀನು ವಶಪಡಿಸಿಕೊಂಡರು. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ನನ್ನದೇನೂ ತಪ್ಪಿಲ್ಲ ಎಂದು ವಾದಿಸುತ್ತಲೇ ಬಂದರು ಎಂದು ಮೇರಿಕೋಮ್ ವಿವರಿಸಿದ್ದಾರೆ.
ಎಲ್ಲವನ್ನೂ ಪ್ರಶ್ನಿಸಲು ಆರಂಭಿಸಿದಾಗ ನನ್ನ ಚಾರಿತ್ರ್ಯದ ನಂತರ ಬಹಿರಂಗವಾಗಿ ಪ್ರಶ್ನಿಸಿದ್ದು ನನಗೆ ತುಂಬಾ ನೋವುಂಟು ಮಾಡಿತು. ಇದೆಲ್ಲಾ ನೋಡಿದ ಮೇಲೆ ನನ್ನ ಸಾಧನೆಗೆ ಬೆಲೆಯೇ ಇಲ್ಲ ಅನಿಸಿತು. ನಾನು ಕುಗ್ಗಿ ಹೋಗಿದ್ದೆ. ನಾಲ್ಕು ಮಕ್ಕಳು ಇದ್ದಿದ್ದರಿಂದ ನನಗೆ ಬೇರೆ ಆಯ್ಕೆಗಳಿರಲಿಲ್ಲ. ಹಾಗಾಗಿ ಮಕ್ಕಳಿಗಾಗಿ ನಾನು ಮುಂದಿನ ದಾರಿ ನಿರ್ಧರಿಸಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
ಮಕ್ಕಳಿಗಾಗಿ ನಾನಯು ಮತ್ತೆ ಕಷ್ಟಪಟ್ಟು ದುಡಿಯಲು ಆರಂಭಿಸಿದೆ. ನಾನು ಎಷ್ಟು ಕಷ್ಟಪಟ್ಟೆ ಎಂಬುದು ದೇವರಿಗೆ ಮಾತ್ರ ಗೊತ್ತು. ಇಷ್ಟೆಲ್ಲಾ ಆದರೂ ನಾನು ಆತನ ಮೇಲೆ ಯಾವುದೇ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.
ಸಾಧನೆಯ ಉತ್ತುಂಗದಿಂದ ವೈಯಕ್ತಿಕ ಜೀವನದಲ್ಲಿ ಬಿದ್ದ ಮೇರಿಕೋಮ್ ಇದೀಗ ಮತ್ತೆ ಜಾಹಿರಾತು ಮತ್ತು ಒಪ್ಪಂದಗಳ ಮೂಲಕ ಮತ್ತೆ ಹಣಕಾಸಿನ ಸ್ಥಿರತೆಯತ್ತ ದಾಪುಗಾಲಿರಿಸಿದ್ದಾರೆ.



