ನೆಟ್ ಅಭ್ಯಾಸದ ವೇಳೆ ಗಾಯಗೊಂಡ ವಿಕೆಟ್ ಕೀಪರ್ ರಿಷಭ್ ಪಂತ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ದೆಹಲಿಯ ಬಿಸಿಎ ಬಿ ಮೈದಾನದಲ್ಲಿ ಶನಿವಾರ ಸುಮಾರು ೫೦ ನಿಮಿಷಗಳ ಸರಾಗವಾಗಿ ಬ್ಯಾಟ್ ಮಾಡಿದ ರಿಷಭ್ ಪಂತ್ ಸೊಂಟಕ್ಕೆ ಚೆಂಡು ಬಡಿದ ನಂತರ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.
ಬಲಭಾಗದ ಸ್ನಾಯು ಸೆಳತಕ್ಕೆ ಒಳಗಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಮೂಳೆ ಮುರಿತ ಕಂಡು ಬಂದಿದ್ದು ವಿಶ್ರಾಂತಿಗೆ ಸೂಚಿಸಲಾಗಿದೆ.
ಇದೀಗ ಪಂತ್ ಹಲವು ದಿನಗಳ ವಿಶ್ರಾಂತಿ ಪಡೆದ ನಂತರ ಬೆಂಗಳೂರಿನ ಎನ್ ಸಿಎನಲ್ಲಿ ದೈಹಿಕ ಸಕ್ಷಮತೆ ಸಾಬೀತುಪಡಿಸಿದ ನಂತರ ತಂಡಕ್ಕೆ ಮರಳಬಹುದಾಗಿದೆ.
ರಿಷಭ್ ಪಂತ್ ವಿಜಯ್ ಹಜಾರೆ ಟ್ರೋಫಿಯಲ್ಲಿ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ರೈಲ್ವೆಸ್ ವಿರುದ್ಧ ಶತಕ ಸಿಡಿಸಿ ಭಾರತ ತಂಡಕ್ಕೆ ಮರಳಿದ್ದರು.



