ಚಿಂತಕ, ಶಿಕ್ಷಣ ತಜ್ಞ ಪ್ರೊ.ಜಿ.ರಾಮಕೃಷ್ಣ, ಶತಾಯುಷಿ ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ನಿವೃತ್ತ ಸಾರಿಗೆ ಅಧಿಕಾರಿ ಹಾಗೂ ಸಮಾಜ ಸೇವಕ ಎಚ್.ಸಿ.ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ `ನಾಡೋಜ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಿದ್ಯಾರಣ್ಯ ಕ್ಯಾಂಪಸ್ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ (ಘಟಿಕೋತ್ಸವ) ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್ಚಂದ್ರ ಗೆಹಲೋತ್ ನಾಡೋಜ ಗೌರವ ಪ್ರದಾನ ಮಾಡಲಿದ್ದಾರೆ.
ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಸೋಮವಾರ ಕ್ಯಾಂಪಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದು, ‘ಸತ್ಯನ್ ಅವರ ವಿರುದ್ಧ ಪ್ರಕರಣಗಳು ಇತ್ಯರ್ಥಗೊಂಡಿದ್ದು, ನಾಡೋಜ ಪ್ರಶಸ್ತಿ ನೀಡಲು ರಾಜ್ಯಪಾಲರು ಸಮ್ಮತಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳವಾರ ಮಧ್ಯಾಹ್ನದ ತನಕವೂ ಸಮಯ ಇದೆ. ಸತ್ಯನ್ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಉಳಿದಿರುವುದು ದೃಢಪಟ್ಟರೆ ಕೊನೆಯ ಕ್ಷಣದಲ್ಲಿ ಸಹ ಗೌರವವನ್ನು ತಡೆಹಿಡಿಯುವುದು ಸಾಧ್ಯವಿದೆ. ರಾಜ್ಯಪಾಲರೇ ಸತ್ಯನ್ ಅವರಿಗೆ ನಾಡೋಜ ನೀಡಿ ಗೌರವಿಸಲು ಸೂಚಿಸಿದ ಮೇರೆಗೆ ಗೌರವ ಪಡೆಯುವವರ ಪಟ್ಟಿಯಲ್ಲಿ ಅವರನ್ನೂ ಸೇರಿಸಲಾಗಿದೆ ಎಂದು ಕುಲಪತಿ ವಿವರಿಸಿದರು.
ಈ ಬಾರಿ 107 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಪದವಿ ಪೂರೈಸಿದ 123 ಮಂದಿ ಸಹ ಪದವಿ ಪಡೆಯಲಿದ್ದಾರೆ. ಕೇವಲ 10 ಸಾವಿರದಷ್ಟು ಜನಸಂಖ್ಯೆ ಇರುವ ಮುಕ್ರಿ ಸಮುದಾಯದಲ್ಲೇ ಹುಟ್ಟಿ, ಪದವಿ, ಸ್ನಾತಕೋತ್ತರ ಪದವಿ ಗಳಿಸಿ ‘ಮುಕ್ರಿಗಳ ಮೌಖಿಕ ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ ಬರೆದ ಸಿ.ಪಿ.ಶಿವಚಂದ್ರ ಪಿಎಚ್.ಡಿ.ಪದವಿ ಪಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದು ಕುಲಪತಿ ಹೇಳಿದರು.



