ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಹಿ ಸುದ್ದಿ ನೀಡಿದೆ.
ಕಳೆದ ಹಲವು ತಿಂಗಳಿಂದ ಮೀಸಲಾತಿ ಗೊಂದಲಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದ್ದು,ಒಟ್ಟು 56,432 ವಿವಿಧ ಹುದ್ದೆಗಳ ನೇಮಕಾತಿಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಲಿದೆ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ವಿಳಂಬದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಮೀಸಲಾತಿ ಪ್ರಮಾಣವನ್ನು ಶೇ 56 ಕ್ಕೆ ಏರಿಸುವ ಪ್ರಸ್ತಾವನೆ ಇದ್ದರೂ, ಅದು ಕಾನೂನು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು ಎಂಬ ಉದ್ದೇಶದಿಂದ ಸದ್ಯಕ್ಕೆ ಶೇ 50ರಷ್ಟು ಮೀಸಲಾತಿ ಮಿತಿಯಲ್ಲೇ ನೇಮಕಾತಿ ನಡೆಸಲು ಸಂಪುಟ ನಿರ್ಧರಿಸಿದೆ. ಈ ಮೂಲಕ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾದಂತಾಗಿದೆ.
ಸಂಪುಟದ ಈ ತೀರ್ಮಾನದಿಂದ ಒಳ ಮೀಸಲಾತಿ ಜಾರಿಯಲ್ಲಿ ಸಣ್ಣ ಬದಲಾವಣೆಯಾಗುವ ಸಾಧ್ಯತೆಯಿದೆ. ಪರಿಶಿಷ್ಟ ಜಾತಿಯ (ಎಸ್ ಸಿ) ಮೀಸಲಾತಿಯನ್ನು ಶೇ 17ಕ್ಕೆ ಏರಿಸಲಾಗಿದ್ದರೂ, ಒಟ್ಟು ಮೀಸಲಾತಿಯನ್ನು ಶೇ 50ರಷ್ಟು ಸೀಮಿತಗೊಳಿಸಬೇಕಾದ ಅನಿವಾರ್ಯತೆ ಇದೆ.
ಪ್ರಸ್ತುತ ಹೊರಡಿಸಲಿರುವ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಹಳೆಯ ಶೇ 15ರಷ್ಟು ಮೀಸಲಾತಿ ಆಧಾರದ ಮೇಲೆ ಒಳ ಮೀಸಲಾತಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಶೇ17 ಮೀಸಲಾತಿ ಅನ್ವಯಿಸಿದರೆ ಒಟ್ಟು ಮಿತಿ ಶೇ 50ರಷ್ಟು ಮೀರುವುದರಿಂದ ಈ ಕ್ರಮ ಅನಿವಾರ್ಯ ಎಂದು ಸರ್ಕಾರ ಭಾವಿಸಿದೆ.
ಆದರೆ, ಈ ಕ್ರಮಕ್ಕೆ ಎಸ್ಸಿ ಸಮುದಾಯದ ಸಚಿವರಾದ ಕೆಎಚ್ ಮುನಿಯಪ್ಪ, ಹೆಚ್.ಸಿ. ಮಹಾದೇವಪ್ಪ ಹಾಗೂ ಡಾ.ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿ ಏರು ಧ್ವನಿಯಲ್ಲಿ ಜಟಾಪಟಿ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ಏರುಧ್ವನಿಯಲ್ಲಿ ಚರ್ಚೆ ನಡೆಯುತ್ತಿದ್ದು ಶೇ.50 ಮೀಸಲಾತಿ ಅಡಿಯಲ್ಲೇ ನೇಮಕಾತಿ ಮಾಡುವುದಾದರೆ, ಅದರಲ್ಲೇ ಒಳ ಮೀಸಲಾತಿ ಕೊಡಿ ಎಂದು ಸಚಿವ ಸಂಪುಟ ಸಭೆಯಲ್ಲಿ ಮುನಿಯಪ್ಪ ಪಟ್ಟು ಹಿಡಿಸಿದ್ದಾರೆ. ಹೀಗಾಗಿ, ಪುನಃ ಚರ್ಚೆ ಮಾಡೋಣ ಎನ್ನುತ್ತಿರುವ ಸಚಿವ ಪರಮೇಶ್ವರ್ ಕೂಡ ಸಾಥ್ ಕೊಟ್ಟಿದ್ದಾರೆ



