ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿಗೆ ಆಗಮಿಸಿರುವ ಓಡಿಶಾದ ಕಾಂಗ್ರೆಸ್ ಶಾಸಕರು ಶನಿವಾರ ಮೈಸೂರು ಪ್ರವಾಸ ಕೈಗೊಂಡಿದ್ದು, ವಿಶ್ವವಿಖ್ಯಾತ ಮೈಸೂರು ಅರಮನೆ ಹಾಗೂ ಚಾಮುಂಡೇಶ್ವರಿ ದರ್ಶನ ಪಡೆದರು.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಆಪರೇಷನ್ ಕಮಲದ ಭೀತಿಯಿಂದ ಕರ್ನಾಟಕಕ್ಕೆ ಆಗಮಿಸಿರುವ ಓಡಿಶಾದ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಬಿಡಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಿಡದಿಯ ರೆಸಾರ್ಟ್ನಿಂದ ಶನಿವಾರ ಬೆಳಿಗ್ಗೆ ಹೊರಟ ಒಡಿಶಾ ಕಾಂಗ್ರೆಸ್ ಶಾಸಕರೆಲ್ಲರೂ ಒಂದೇ ಬಸ್ನಲ್ಲಿ ಭದ್ರತೆಯೊಂದಿಗೆ ಮೈಸೂರಿಗೆ ಆಗಮಿಸಿದರು. ಮೊದಲು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಒಡಿಶಾದ ಕಾಂಗ್ರೆಸ್ ಶಾಸಕರೊಬ್ಬರು, ನಾವು ಅರಮನೆ ನೋಡಲು ಮಾತ್ರ ಬಂದಿದ್ದೇವೆ ಎಂದು ತಿಳಿಸಿದರು.
ಇದೇ ಮಾರ್ಚ್ 16 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಡ್ಡ ಮತದಾನ ಮಾಡಿಸುವ ಸಾಧ್ಯತೆ ಇದೆ. ಈ ಭೀತಿಯ ಹಿನ್ನೆಲೆ ಶಾಸಕರನ್ನು ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದೆ.



