ಲಿಂಗಸುಗೂರು : ಮದ್ಯದ ಅಮಲಿನಲ್ಲಿ ಮನೆಯಲ್ಲೇ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶನಿವಾರ ಸಂಜೆ ಲಿಂಗಸಗೂರು ಪಟ್ಟಣದ ಬಸವಸಾಗರ ಕ್ರಾಸ್ ಸಮೀಪದ ಸಿದ್ರಾಮೇಶ್ವರ ಶಾಲೆ ಹತ್ತಿರ ನಡೆದಿದೆ.
ಮೃತ ವ್ಯಕ್ತಿಯನ್ನು ಬಸವರಾಜ್ (32) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಮೃತನ ತಮ್ಮ ಶ್ರೀಧರ (27) ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಲಿಂಗಸಗೂರು ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಸವರಾಜ್ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಹಾಗೂ ಮನೆಯವರೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ತಮ್ಮ ಶ್ರೀಧರ ತಾಯಿ ಮೇಲೆ ಅವಾಚ್ಯ ಶಬ್ದಗಳಿಂದ ಬೈಯಬಾರದು ಎಂದು ಅಣ್ಣನಿಗೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಹಾಗೂ ಗಲಾಟೆ ನಡೆದಿದೆ.
ಗಲಾಟೆಯ ಬಳಿಕ ಬಸವರಾಜ್ ಬೆಡ್ರೂಮಿನಲ್ಲಿ ಮಲಗಿಕೊಂಡಿದ್ದ ವೇಳೆ ಆರೋಪಿ ಶ್ರೀಧರ ತಲೆದಿಂಬಿನಿಂದ ಬಾಯಿಯನ್ನು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಘಟನೆ ಆತ್ಮಹತ್ಯೆಯಂತೆ ತೋರಿಸಲು ಸೀರೆಯನ್ನು ಬಳಸಿ ನೇಣು ಹಾಕಿಕೊಂಡಂತೆ ನಾಟಕ ರೂಪಿಸಿದ್ದಾನೆ ಎನ್ನಲಾಗಿದೆ.
ನಂತರ ಮನೆಯವರು ಬಸವರಾಜ್ ಅವರನ್ನು ಖಾಸಗಿ ವಾಹನದಲ್ಲಿ ಲಿಂಗಸಗೂರು ಸರ್ಕಾರಿ ಆಸ್ಪತ್ರೆ ಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಮೃತನ ತಂದೆ ವಾಸುದೇವ ಶಿರಗುಂಪಿ ನೀಡಿದ ದೂರಿನ ಮೇರೆಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 174/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ಸಪೆಕ್ಟರ್ ಹೊಸಕೇರೆಪ್ಪ ಕೆ. ತನಿಖೆ ಕೈಗೊಂಡಿದ್ದಾರೆ.



