ಚೆನ್ನೈ: ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಉರುಳಿಸಲು ಡಿಎಂಕೆ ಸಂಚು ರೂಪಿಸಿತ್ತು ಎಂಬ ವದಂತಿ ತಮಿಳುನಾಡಿನಲ್ಲಿ ರಾಜಕೀಯ ಸಂಚಲ ಸೃಷ್ಟಿಸಿದೆ.
ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿಯನ್ನು ವಿಫಲಗೊಳಿಸಲಾಗಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಸ್ಪೋಟಕ ಮಾಹಿತಿ ಹಂಚಿಕೊಂಡಿದೆ.
ಟಿವಿಕೆ ಶಾಸಕರೊಬ್ಬರ ದೂರಿನ ಮೇರೆಗೆ 15 ಟಿವಿಕೆ ಶಾಸಕರು ಏಕಕಾಲದಲ್ಲಿ ರಾಜೀನಾಮೆ ನೀಡಿ, ಸರ್ಕಾರವನ್ನು ಉರುಳಿಸುವ ಸಂಚನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರಿನ ಮೇರೆಗೆ ಅಧಿಕಾರಿಗಳು ತನಿಖೆ ನಡೆಸಿ, ಸಲಹಾ ಸಂಸ್ಥೆಯ ಉದ್ಯೋಗಿಯನ್ನು ಬಂಧಿಸಿದ್ದಾರೆ. ತನಿಖೆಯ ಸಮಯದಲ್ಲಿ ಆ ವ್ಯಕ್ತಿ ಡಿಎಂಕೆ ಶಾಸಕ ಸೆಂಥಿಲ್ ಬಾಲಾಜಿ ಅವರೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾಗಿ ಅಧಿಕಾರಿಗಳು ವರದಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಚೆನ್ನೈನಲ್ಲಿ ಬಂಧಿಸಲಾಗಿದ್ದರೆ, ಮತ್ತಿಬ್ಬರನ್ನು ಕರೂರ್ನಿಂದ ಬಂಧಿಸಲಾಗಿದೆ. ಅಧಿಕಾರಿಗಳು ಈ ಪಿತೂರಿ ಮತ್ತು ಅದರ ವ್ಯಾಪಕ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಶಾಸಕರಿಗೆ 35 ಕೋಟಿ ರೂ.ಗಳ ಆಫರ್?
ಉತ್ತಂಗರೈನ ಟಿವಿಕೆ ಶಾಸಕ ಎನ್. ಇಳಯರಾಜ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಟಿವಿಕೆ ನಾಯಕರಾಗಿರುವ ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು, ಸಲಹಾ ಸಂಸ್ಥೆ ಐಪಿಡಿಎಸ್ನ ವ್ಯಕ್ತಿಯೊಬ್ಬರು ತಮಗೆ 35 ಕೋಟಿ ರೂ.ಗಳ ಆಫರ್ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಯಾರೊಂದಿಗೂ ಚರ್ಚಿಸಿದಂತೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಅವರ ಆಪ್ತ ಎಂದು ಹೇಳಲಾಗಿದ್ದು, ಪ್ರತಿಪಕ್ಷ ಡಿಎಂಕೆ ವಿಜಯ್ ಅವರ ಟಿವಿಕೆ ಸರ್ಕಾರವನ್ನು ಉರುಳಿಸುವ ಯೋಜನೆ ರೂಪಿಸುತ್ತಿದೆಯೇ ಎಂಬ ಅನುಮಾನ ಮೂಡಲು ಕಾರಣವಾಗಿದೆ.



