Monday, July 6, 2026
Google search engine
Homeಬೆಂಗಳೂರುಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ಕಾಂಗ್ರೆಸ್ ಸಂಚು: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ಕಾಂಗ್ರೆಸ್ ಸಂಚು: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವು ಅರಣ್ಯ ಇಲಾಖೆಯನ್ನು ಚೂ ಬಿಟ್ಟು ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಕೆಲ ಮಾಧ್ಯಮಗಳಲ್ಲಿ ಹೆಚ್ಎಂಟಿಗೆ ರಾಜ್ಯ ಅರಣ್ಯ ಇಲಾಖೆ ನೋಟಿಸ್ ನೀಡಿ ಭೂಮಿ ತೆರವು ಮಾಡಲು ಗಡುವು ವಿಧಿಸಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಸಚಿವರು; ಈಗಾಗಲೇ ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಗಡುವು ವಿಧಿಸಿ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕೂಡ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹೆಚ್ಎಂಟಿ ವಶದಲ್ಲಿರುವ 430 ಎಕರೆ ಜಮೀನು ಅರಣ್ಯ ಪ್ರದೇಶ ಆಗಿರುವುದರಿಂದ ಕೂಡಲೇ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎನ್.ರವೀಂದ್ರ ಕುಮಾರ್ ಆದೇಶ ನೀಡಿರುವುದು ನ್ಯಾಯಾಂಗ ಕಲಾಪಗಳಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೆ ಈ ಅಧಿಕಾರಿಗೆ ಅಂತಹ ಆದೇಶ ನೀಡುವ ಅಧಿಕಾರ ವ್ಯಾಪ್ತಿಯು ಇರುವುದಿಲ್ಲ. ಈ ಬಗ್ಗೆ ಹೆಚ್ಎಂಟಿ ನ್ಯಾಯಾಲಯದಲ್ಲಿಯೇ ಪ್ರಶ್ನೆ ಮಾಡುತ್ತದೆ ಎಂದು ಸಚಿವರು ಹೇಳಿದರು.

ಅನೇಕ ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ಹೆಚ್‌ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಉದ್ದೇಶದಿಂದ ನಾನು ಪ್ರಧಾನ ಮಂತ್ರಿಗಳು ಮತ್ತು ಕೇಂದ್ರದ ಹಣಕಾಸು ಸಚಿವರನ್ನು ಒಪ್ಪಿಸಿ ವಿಶೇಷ ಪ್ಯಾಕೇಜ್ ತರುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೆ. ಈ ಕಾರ್ಖಾನೆಯು ನಾನು ಸಚಿವನಾಗಿರುವ ಬೃಹತ್ ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿ ಇರುವಾಗಲೇ ರಾಜ್ಯ ಸರಕಾರ ದುರುದ್ದೇಶದಿಂದ ಇಂತಹ ನೋಟಿಸ್ ಕೊಡಿಸಿದೆ ಎಂದು ಸಚಿವ ಕುಮಾರಸ್ವಾಮಿ ಆರೋಪ ಮಾಡಿದರು.

ಈ ಭೂಮಿಯು ಸುಮಾರು ₹15,000 ಕೋಟಿ ಬೆಲೆ ಬಾಳುತ್ತದೆ ಎಂದು ಈ ಅಧಿಕಾರಿ ಮಹಾಶಯ ಆ ಭೂಮಿಗೆ ಬೆಲೆ ಕಟ್ಟಿದ್ದಾರೆ. ಅಂದ ಮೇಲೆ ಈ ಭೂಮಿಯ ಮೇಲೆ ಯಾರದೋ ಕಾಕದೃಷ್ಟಿ ಬಿದ್ದಿರಬೇಕು ಎಂಬುದು ನನ್ನ ಅನುಮಾನ. ಈಗಾಗಲೇ ಹೆಚ್ಎಂಟಿ ಭೂಮಿಯನ್ನು ಇದೇ ಸರಕಾರದ ಕೃಪೆಯಿಂದ ಅನೇಕರು ಕೊಳ್ಳೆ ಹೊಡೆದಿದ್ದಾರೆ. 175 ಎಕರೆ ಭೂಮಿಯು ಯಾವಾಗ ಮಾರಾಟವಾಯಿತು, ಎಲ್ಲಿ ನೋಂದಣಿ ಆಯಿತು ಎನ್ನುವ ಎಲ್ಲಾ ದಾಖಲೆಗಳು ನನ್ನಲ್ಲಿವೆ. ಆ ಜಾಗದಲ್ಲಿ ಯಾರು ಯಾರು ಮನೆ ಕಟ್ಟಿಕೊಂಡಿದ್ದಾರೆ, ಲೂಟಿ ಹೊಡೆದ ಭೂಮಿಯಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ದೊಡ್ಡದೊಡ್ಡ ಅಪಾರ್ಟ್ಮೆಂಟ್’ಗಳು ಬಂದಿವೆ. ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

2006ರಲ್ಲಿ ನಾನು ಮುಖ್ಯಮಂತ್ರಿ ಆಗುವ ತನಕ ಹೆಚ್ಎಂಟಿ ಭೂಮಿಯ ಲೂಟಿ ನಡೆಯುತ್ತಲೇ ಇತ್ತು. ಯಾವುದೇ ಕಾರಣಕ್ಕೂ ಈ ಭೂಮಿ ಭೂಗಳ್ಳರ ಪಾಲಾಗಬಾರದು ಎಂದು ಆಗಲೇ ಈ ಭೂಮಿಯ ಕ್ರಯಕ್ಕೆ ತಡೆ ಕೊಟ್ಟೆ. ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟವರ ಸರಕಾರದಲ್ಲಿ ಯಾವುದೇ ಎಗ್ಗಿಲ್ಲದೆ ಹೆಚ್ಎಂಟಿ ಭೂಮಿಯನ್ನು ರಣಹದ್ದುಗಳಂತೆ ಕಿತ್ತು ತಿನ್ನಲಾಯಿತು ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಹೆಚ್ಎಂಟಿ ಕಾರ್ಖಾನೆಯ ವಿಶೇಷ ಪ್ಯಾಕೇಜ್ ಕುರಿತಂತೆ ಮುಂದಿನ ವಾರ ಸಭೆ ನಡೆಯಬೇಕಿತ್ತು. ಯಾವುದೇ ಸಂದರ್ಭದಲ್ಲಿ ಪ್ಯಾಕೇಜ್ ಘೋಷಣೆಯಾಗಿ ಬೆಂಗಳೂರು ನಗರಕ್ಕೆ ಕಳಸಪ್ರಾಯವಾಗಿದ್ದ ಈ ಕಾರ್ಖಾನೆಗೆ ಮರುಜೀವ ಕೊಡುವ ನಿರ್ಧಾರ ಹೊರ ಬೀಳುವುದರಲ್ಲಿ ಇತ್ತು. ಆದರೆ ಈ ಅರಣ್ಯಾಧಿಕಾರಿಗೆ ಯಾರಿಂದ ಪ್ರೇರಣೆಯಾಯಿತು ಎಂಬುದು ಗೊತ್ತಿಲ್ಲ. ನಿವೃತ್ತಿಯಾಗುವುದಕ್ಕೆ ಮೊದಲು, ಕೇವಲ 15 ದಿನಗಳ ಮುನ್ನ ಈ ಅಧಿಕಾರಿ ನೋಟಿಸ್ ನೀಡುವ ಹುಂಬತನ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇದೆ ಎಂಬ ಕನಿಷ್ಠ ಪರಿಜ್ಞಾನವೂ ಈ ಅಧಿಕಾರಿಗೆ ಬೇಡವೇ? ಅದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಆ ಅಧಿಕಾರಿ ಅನುಭವಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಈ ಅಧಿಕಾರಿ ಯಾರು? ಈತನ ಹಿನ್ನೆಲೆ ಏನು? ಈ ಮನುಷ್ಯ ಯಾವ ಯಾವ ರೀತಿ ಅರಣ್ಯ ಸಂರಕ್ಷಣೆ ಮಾಡಿದ್ದಾರೆ? ಇತರ ಗಾಡ್ ಫಾದರ್ ಯಾರು ಎಂಬ ಎಲ್ಲಾ ಮಾಹಿತಿಯು ನನ್ನಲ್ಲಿ ಇದೆ. ಆದಷ್ಟು ಬೇಗ ಇದೆಲ್ಲವನ್ನು ಹೊರಗೆ ಇಡುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಗುಡುಗಿದರು.

ರಾಜ್ಯ ಸರಕಾರ ಆಡಳಿತ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದೆ. ಅದಕ್ಕಾಗಿ ಹೆಚ್ಎಂಟಿ ಮೇಲೆ ಅದರ ಕೆಟ್ಟ ಕಣ್ಣು ಬಿದ್ದಂತೆ ಕಾಣುತ್ತಿದೆ. ಕಂಡ ಕಂಡ ಕಡೆ ಸರ್ಕಾರವೇ ಬೇಲಿ ಹಾಕುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಉಳಿಯಬಾರದು ಎನ್ನುವುದು ಈ ಸರಕಾರದ ದುರುದ್ದೇಶವಾಗಿದೆ. ಈಗಾಗಲೇ ಎನ್ಜಿಎಫ್, ಮೈಸೂರು ಪೇಪರ್ ಮಿಲ್ಸ್ ಮುಂತಾದ ಕಾರ್ಖಾನೆಗಳನ್ನು ನುಂಗಿ ನೀರು ಕುಡಿದಾಗಿದೆ. ಈ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡಬೇಕೆಂದು ನಾನು ಶತಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿಗೆ ರಾಜ್ಯ ಸರಕಾರ ಈ ಕಾರ್ಖಾನೆಯ ಭೂಮಿಗೂ ಕಣ್ಣು ಹಾಕಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ರಾಜ್ಯ ಸರಕಾರವೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದರೆ ಕೈಗಾರಿಕೆಗಳು ಎಲ್ಲಿಂದ ಬರುತ್ತವೆ? ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೂ ಕೊಡಲಿಲ್ಲ ಎಂದು ಪದೇಪದೇ ಹೇಳುವ ಇವರಿಗೆ ನಾವು ಕೊಡುತ್ತೇವೆ ಎಂದರು ತೆಗೆದುಕೊಳ್ಳುವ ಮನಸ್ಸಿಲ್ಲ ಎಂದ ಅವರು; ಕರ್ನಾಟಕ ಸರಕಾರದ ಈ ಕ್ರಮದಿಂದ ಹೆಚ್ಎಂಟಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಆತಂಕ ಪಡಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಖಾನೆಗೆ ಮರುಜೀವ ಕೊಡುವ ಕೆಲಸ ಮಾಡಿಯೇ ಮಾಡುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನು ಬಹಿರ ಆದೇಶ ನೀಡುವ ಮೂಲಕ ಅರಣ್ಯ ಇಲಾಖೆ ಹೆಚ್ಎಂಟಿ ಜಾಗದಲ್ಲಿ ಅತಿಕ್ರಮಣ ಮಾಡಲು ಹೊರಟಿದೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ಕೇಂದ್ರದಲ್ಲಿ ನಾನು ಬೃಹತ್ ಕೈಗಾರಿಕೆ ಸಚಿವನಾದ ಕ್ಷಣದಿಂದಲೇ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿಪಡಿಸುವುದು ಶುರು ಮಾಡಿತು. ಉಕ್ಕು ಸಚಿವನಾಗಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಂತೆಯೇ ಈ ಸರಕಾರ ಕ್ಯಾತೆ ತೆಗೆಯಲು ಶುರು ಮಾಡಿತು. ಅಲ್ಲಿಯೂ ಗಣಿಗಾರಿಕೆ ಮಾಡಲು ನಾನಾ ತೊಂದರೆ ನೀಡುತ್ತಿದೆ. ರಾಜ್ಯ ಸರಕಾರವೇ ಹಣ ಪಡೆದು ಮಂಜೂರು ಮಾಡಿರುವ ಗಣಿಗಳಲ್ಲಿ ಗಣಿಗಾರಿಕೆ ನಡೆಸಲು ಇವರು ಬಿಡುತ್ತಿಲ್ಲ. ಇದರಿಂದ ಪ್ರತಿಷ್ಠಿತ ಕುದುರೆಮುಖ ಉಕ್ಕು ಕಂಪನಿ ಮುಳುಗುವ ಭೀತಿ ಎದುರಿಸುತ್ತಿದೆ ಅಲ್ಲದೆ, ಸಾವಿರಾರು ಕಾರ್ಮಿಕರು ಬೀದಿ ಪಾಲಾಗುವ ಅಪಾಯವಿದೆ. ಇಂತಹ ಪರಿಸ್ಥಿತಿ ಏನಾದರೂ ಸೃಷ್ಟಿಯಾದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಆಗುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ದೂರಿದರು.

ಭಾರತದ ಪ್ರಮುಖ ಉದ್ಯಮವಾಗಿದ್ದ ಎಚ್ಎಂಟಿಯು ಬೆಂಗಳೂರ್ ನಗರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಕೇರಳದ ಕಾಲಮಸ್ಸೆರಿ, ತೆಲಂಗಾಣದ ಹೈದರಾಬಾದ್, ಹರಿಯಾಣದ ಪಿಂಜೋರಾ ಸೇರಿದಂತೆ ಅನೇಕ ಭಾಗಗಳಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಒಂದು ಕಾಲದಲ್ಲಿ ಇಡೀ ದೇಶದಲ್ಲೇ ಪ್ರತಿಷ್ಠಿತ ಮತ್ತು ಲಾಭದಾಯಕ ಉದ್ಯಮವಾಗಿ ನಡೆದ ಹೆಚ್ಎಂಟಿ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಹಾಗಿದ್ದರೂ ಬಾಹ್ಯಾಕಾಶ, ರಕ್ಷಣೆ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಯಂತ್ರಗಳನ್ನು ತಯಾರಿಸಿ ಕೊಡುತ್ತಿದೆ. ಈಗಲೂ ವಿದೇಶಗಳಲ್ಲಿ ಹೆಚ್ಎಂಟಿ ಯಂತ್ರಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಹೆಚ್ಎಂಟಿ ವಾಚ್ ಗಳಿಗೆ ಈಗಲೂ ವಿಪರೀತ ಡಿಮಾಂಡ್ ಇದೆ. ಇಂತಹ ಕೈಗಾರಿಕೆಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುವುದು ಬಿಟ್ಟು ಅವುಗಳ ಅವಸಾನಕ್ಕೆ ರಾಜ್ಯ ಸರಕಾರ ಯತ್ನಿಸುತ್ತಿರುವ ಸರಿಯಲ್ಲ. ಈ ಮಾತನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments