ಬೆಂಗಳೂರು:ಗ್ಯಾರೇಜ್ ಬಳಿ ಮೂತ್ರ ವಿಸರ್ಜನೆ ಮಾಡಿದನೆಂಬ ಕಾರಣಕ್ಕೆ ಅಡುಗೆ ಭಟ್ಟನನ್ನು ಕೊಲೆ ಮಾಡಿದ್ದ ಕಾರ್ ಮೆಕ್ಯಾನಿಕ್ನನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆಸಿ ನಗರದ ನಿವಾಸಿ ಮೊಹಮ್ಮದ್ ಯೂಸೆಫ್ (29) ಬಂಧಿತ ಆರೋಪಿಯಾಗಿದ್ದಾನೆ.ಈತನ ವಿರುದ್ದ ಈ ಹಿಂದೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಸಂಬಂಧ ದೂರು ದಾಖಲಾಗಿದೆ.
ಕಳೆದ ಜು.28 ರಂದು ರಾತ್ರಿ ಕುಣಿಗಲ್ ಮೂಲದ ಅಡುಗೆ ಭಟ್ಟ ಕುಮಾರ್ ಎಂಬುವವರು ಲಗ್ಗೆರೆಯ ಮಿಲಿಟರಿ ಹೋಟೆಲ್ನಲ್ಲಿ ಊಟ ಮಾಡಿ ಯಾರನ್ನೋ ಕರೆತರಲು ಅಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದರು.
ಲಗ್ಗೆರೆಯ ಕೆಂಪೇಗೌಡ ಲೇಔಟ್ ಸರ್ವಿಸ್ ರಸ್ತೆಯಲ್ಲಿರುವ ಗ್ಯಾರೇಜ್ ಸಮೀಪ ಮೂತ್ರ ವಿಸರ್ಜನೆಗೆ ಹೋದಾಗ ಅಲ್ಲಿಯೇ ಇದ್ದ ಕಾರ್ ಮೆಕ್ಯಾನಿಕ್ ಯೂಸೆಫ್ ಗಮನಿಸಿ ಆತನೊಂದಿಗೆ ಜಗಳವಾಡಿ ಕೈಯಿಂದ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಕೆಳಗೆ ಬಿದ್ದ ಕುಮಾರ್ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದಾರೆ.ಸಾರ್ವಜನಿಕರು ಗಮನಿಸಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ರಾತ್ರಿ 10 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ ವಿರೇಶ್ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಕೃತಿ ಟೆಕ್ಕಿ ಸೆರೆ:
ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ತನ್ನ ಮೊಬೈನಲ್ಲಿ ಸರೆ ಹಿಡಿದು ವಿಕೃತಿ ಮೆರೆದ ಸಾಫ್ಟ್ವೇರ್ ಎಂಜಿನಿಯರ್ ಬೇಗೂರು ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ ಐದು ವರ್ಷಗಳಿಂದ ಬೇಗೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುವ ಟೆಕ್ಕಿ ಮಂಜುನಾಥ್ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಜು.27 ರಂದು ಮನೆ ಮಾಲಕಿ ಸ್ನಾನದ ಕೊಠಡಿಯಲ್ಲಿದ್ದಾಗ ಆರೋಪಿ ಮಂಜುನಾಥ ಕಿಟಕಿ ಬಳಿ ಹೋಗಿ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ. ಮಾಲಕಿ ತಕ್ಷಣ ಗಮನಿಸಿ ಕೂಗಿಕೊಂಡಾಗ ಸ್ಥಳದಿಂದ ಆತ ಪರಾರಿಯಾಗಿದ್ದು,ಬಳಿಕ ಪಕ್ಕದ ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಮಾಲಕಿ ಪರಿಶೀಲಿಸಿದಾಗ ತನ್ನ ಮನೆಯಲ್ಲಿ ಬಾಡಿಗೆಗಿರುವ ಮಂಜುನಾಥ ಓಡಿ ಹೋಗುತ್ತಿರುವ ದೃಶ್ಯ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಮೊಬೈಲ್ ಪರಿಶೀಲಿಸಿದಾಗ ಮಾಲಕಿ ಸ್ನಾನ ಮಾಡುತ್ತಿದ್ದ ಹಲವು ವಿಡಿಯೋಗಳು ಪತ್ತೆಯಾಗಿವೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಇನ್ನಷ್ಟು ಮಾಹಿತಿ ಗಳನ್ನು ಕಲೆ ಹಾಕುತ್ತಿದ್ದಾರೆ.



