ಬೆಂಗಳೂರು: ಕಂಠೀರವ ಕ್ರೀಡಾಂಗಣದ ಲಯನ್ಸ್ ಬಾಕ್ಸಿಂಗ್ ಕ್ಲಬ್’ನಲ್ಲಿ ತರಬೇತಿ ಪಡೆಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಾಕ್ಸಿಂಗ್ ತರಬೇತುದಾರನನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಬಾಕ್ಸಿಂಗ್ ತರಬೇತುದಾರ ರಾಮಚಂದ್ರ (50) ಬಂಧಿತ ಆರೋಪಿಯಾಗಿದ್ದಾನೆ, ಸಂತ್ರಸ್ತ ಅಪ್ರಾಪ್ತ ಬಾಲಕಿಯ ತಾಯಿ ಮೇ 22ರ ಶುಕ್ರವಾರ ನೀಡಿದ ಲಿಖಿತ ದೂರಿನ ಅನ್ವಯ ಪೊಲೀಸರು ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತಾ (ಬಿಎನ್ ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿವನ್ನು ವಿಚಾರಣೆ ಕೈಗೊಂಡಿದ್ದಾರೆ.
ಇಂದಿರಾನಗರದದ 17 ವರ್ಷದ ಉದಯೋನ್ಮುಖ ಬಾಕ್ಸರ್, ಕಳೆದ 10 ವರ್ಷಗಳಿಂದ ಕಂಠೀರವ ಕ್ರೀಡಾಂಗಣದ ಆವರಣದ ಲಯನ್ಸ್ ಬಾಕ್ಸಿಂಗ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದಳು. ಬಂಧಿತ ಆರೋಪ ರಾಮಚಂದ್ರ ಬಾಲಕಿಗೆ ಮುಖ್ಯ ತರಬೇತುದಾರನಾಗಿದ್ದ.
ಕಳೆದ ನಾಲ್ಕು ವರ್ಷಗಳಿಂದಲೂ ತರಬೇತುದಾರ ರಾಮಚಂದ್ರ ತನ್ನ ಮಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದು, ಕಳೆದ ಐದಾರು ತಿಂಗಳಿನಿಂದ ಈ ದೌರ್ಜನ್ಯದ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಂಠೀರವ ಕ್ರೀಡಾಂಗಣದ ಆವರಣದಲ್ಲೇ ಆರೋಪಿ ಹಲವು ಬಾರಿ ಬಾಲಕಿಯೊಂದಿಗೆ ಅನುಚಿತವಾಗಿ ನಡೆದುಕೊಂಡು, ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ ಐಆರ್ ) ಉಲ್ಲೇಖಿಸಲಾಗಿದೆ.
ಕಳೆದಮೇ 17 ರಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಕ್ಲಬ್ ವತಿಯಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಪ್ರವಾಸದ ಸಂದರ್ಭದಲ್ಲಿ ತರಬೇತುದಾರನ ವಿಕೃತಿ ಪರಾಕಾಷ್ಠೆ ತಲುಪಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕರೆಸಿಕೊಂಡ ಆರೋಪಿ:
ಸ್ಪರ್ಧೆಯ ನಿಮಿತ್ತ ಚೆನ್ನೈನಲ್ಲಿದ್ದಾಗ, ಆರೋಪಿ ರಾಮಚಂದ್ರ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ತನ್ನ ಖಾಸಗಿ ಕೊಠಡಿಗೆ ಕರೆಸಿಕೊಂಡು ಖಾಸಗಿ ಭಾಗಗಳನ್ನು ಮುಟ್ಟಿ, ಆಕೆಗೆ ಬಲವಂತವಾಗಿ ಮುತ್ತಿಕ್ಕಿ ತೀವ್ರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಕೊಲೆ ಬೆದರಿಕೆ:
ದೌರ್ಜನ್ಯದ ಕುರಿತು ಯಾರಿಗಾದರೂ ಬಾಯಿ ಬಿಟ್ಟರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದರೆ ಜೀವಸಹಿತ ಉಳಿಸುವುದಿಲ್ಲ ಎಂದು ಬಾಲಕಿಗೆ ತರಬೇತುದಾರ ಪ್ರಾಣಬೆದರಿಕೆ ಹಾಕಿದ್ದನು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಬಾಲಕಿಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಕುರಿತು ಮೊದಲೇ ಲಯನ್ಸ್ ಬಾಕ್ಸಿಂಗ್ ಕ್ಲಬ್ನ ಆಡಳಿತ ಸಮಿತಿಯ ಮುಂದೆ ದೂರನ್ನು ತರಲಾಗಿತ್ತು ಎನ್ನಲಾಗಿದೆ. ಆದಾಗ್ಯೂ ಸಮಿತಿಯು ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಕಠಿಣ ಕಾನೂನು ಕ್ರಮ:
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, “ಸಂತ್ರಸ್ತೆಯ ದೂರಿನ ಹಿನ್ನೆಲೆಯಲ್ಲಿ ಕ್ಲಬ್ನ ಆಡಳಿತ ಸಮಿತಿಯು ಈ ಹಿಂದೆ ತರಬೇತುದಾರನ ವಿರುದ್ಧ ಕೈಗೊಂಡ ಕ್ರಮಗಳೇನು ಮತ್ತು ಬೇರೆ ಯಾವುದೇ ವಿದ್ಯಾರ್ಥಿನಿಯರು ಈತನ ವಿರುದ್ಧ ಇಂತಹ ದೂರುಗಳನ್ನು ನೀಡಿದ್ದಾರೆಯೇ ಎಂಬುದನ್ನು ನಾವು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ.
ಒಂದು ವೇಳೆ ಬಾಲಕಿಯ ರಕ್ಷಣೆಗೆ ಧಾವಿಸುವಲ್ಲಿ ಮತ್ತು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಮಿತಿಯು ವಿಫಲವಾಗಿರುವುದು ಕಂಡುಬಂದರೆ, ಕಾನೂನಿನ ಪ್ರಕಾರ ಸಮಿತಿಯ ಸದಸ್ಯರನ್ನೂ ಸಹ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.



