ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಕಮೆಂಟ್ ಮಾಡಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ದರ್ಶನ್ ಪರ ಅಭಿಮಾನಿಗಳು ಹಾಗೂ ರಮ್ಯಾ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷ ಉಂಟಾಗಿತ್ತು.
ಸೋಮವಾರ ಬೆಳಿಗ್ಗೆಯಿಂದ ವಾಕ್ಸಮರ ನಡೆದಿದ್ದು, ರಮ್ಯಾ ಇನ್ ಸ್ಟಾಗ್ರಾಂನಲ್ಲಿ ರೇಣುಕಾಸ್ವಾಮಿ ಕಳುಹಿಸಿದ ಸಂದೇಶಗಳಿಗೂ ದರ್ಶನ್ ಅಭಿಮಾನಿಗಳು ಕಳುಹಿಸುವ ಸಂದೇಶಗಳಿಗೂ ವ್ಯಾತ್ಯಾಸವಿಲ್ಲ ಎಂದು ಆರೋಪಿಸಿದ್ದರು.
ಸೋಮವಾರ ಸಂಜೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ರಮ್ಯಾ, ದರ್ಶನ್ ಅಭಿಮಾನಿಗಳ ಕೆಟ್ಟ ಸಂದೇಶಗಳ ವಿರುದ್ಧ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳ ಪೇಜ್ ನಲ್ಲಿ ದರ್ಶನ್ ಗೆ ಗೌರವ ನೀಡುವುದಿದ್ದರೆ ಯಾರೂ ಪ್ರತಿಕ್ರಿಯೆ ನೀಡಬಾರದು ಎಂದು ಪೋಸ್ಟ್ ಹಾಕಲಾಗಿತ್ತು. ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಶಬ್ಧದಿಂದ ಮೂರ್ಖರನ್ನು ಅಳೆಯಬಹುದು. ಹಾಗೂ ನಿಶ್ಯಬ್ಧದಿಂದ ವ್ಯಕ್ತಿಯನ್ನು ಅಳೆಯಬಹುದು ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಚೌಧರಿ, ರಮ್ಯಾ ವಿರುದ್ಧ ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಅಭಿಮಾನಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.



