ಬೆಂಗಳೂರು: ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ದೊಡ್ಡ ಆಮೀಷವೊಡ್ಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿಯ ರೆಸಾರ್ಟ್ ನಲ್ಲಿ ಅಸ್ಸಾಂನ ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಒಡಿಶಾ ಶಾಸಕರು ರಾಮನಗರ ರೆಸಾರ್ಟ್ ನಲ್ಲಿರುವ ಬಗ್ಗೆ ಕೇಳಿದಾಗ, “ರಾಜಕೀಯ ಪಕ್ಷಗಳಿಗೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ರಂಗದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ವಿಚಾರ ಇದು. ಅವರು ಇಲ್ಲಿಗೆ ಬಂದಿರುವಾಗ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಅವರದೇ ಶಾಸಕರ ಮೇಲೆ ನಂಬಿಕೆ ಇಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹಾಗಿದ್ದರೆ ಅವರು ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದ್ದು ಯಾಕೆ?” ಎಂದು ಪ್ರಶ್ನಿಸಿದರು.
ನಮ್ಮ ಶಾಸಕರಿಗೆ ದೊಡ್ಡ ಆಫರ್
ಇದು ಹೈಕಮಾಂಡ್ ನಾಯಕರು ಕೊಟ್ಟಿರುವ ಟಾಸ್ಕ್ ಆಗಿದೆಯೇ ಎಂದು ಕೇಳಿದಾಗ, “ಯಾವ ಟಾಸ್ಕ್ ಕೂಡ ಇಲ್ಲ. ರಾಜ್ಯಸಭಾ ಚುನಾವಣೆ ಇರುವ ಕಾರಣಕ್ಕೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ನಮ್ಮವರ ಮೇಲೆ ಒತ್ತಡವಿದೆ. ದೊಡ್ಡ, ದೊಡ್ಡ ಆಫರ್ ಗಳನ್ನು ಕೊಡುತ್ತಿದ್ದಾರೆ. 14-15 ಜನ ಎಂಎಲ್ ಎಗಳು ಇಲ್ಲಿಗೆ ಬಂದಿದ್ದಾರೆ. ಒಡಿಸ್ಸಾ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ಜಾತ್ಯಾತೀತ ಪಕ್ಷಗಳೆಲ್ಲಾ ಒಂದಾಗಿದ್ದೇವೆ. ಆಪರೇಷನ್ ಕಮಲ ನಡೆಯುವ ಸಂಭವಿದೆ ಎಂದರು.
ಪಕ್ಷದ ಅಧ್ಯಕ್ಷರು ಕರೆ ಮಾಡಿದಾಗ ಗೌರವ ನೀಡುವುದು ನಮ್ಮ ಕರ್ತವ್ಯ. ಬನ್ನಿ ಇಲ್ಲೇ ವಾತಾವರಣ ಚೆನ್ನಾಗಿದೆ ಎಂದು ಹೇಳಿದೆ. ಎಲ್ಲಾ ಶಾಸಕರು ಖುಷಿಯಾಗಿದ್ದಾರೆ. ಹೊಸಬರು ಸಹ ಇದ್ದಾರೆ. ಅವರೇ ಬಂದು ಇಲ್ಲಿ ಉಳಿದುಕೊಂಡಿದ್ದಾರೆ. ನಾವು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದೇವೆ. ಬಿಜೆಡಿ, ಕಮ್ಯುನಿಸ್ಟ್ ಪಕ್ಷ ಹಾಗೂ ನಾವು ಜಂಟಿಯಾಗಿ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇವೆ. ಬಿಜೆಪಿ ಮಾಡುವುದು ಮಾಡುತ್ತದೆ, ನಾವು ಮಾಡೋದು ಮಾಡುತ್ತೇವೆ” ಎಂದರು.
ಟ್ರಬಲ್ ಶೂಟರ್ ಕೆಲಸ ಸಮಾಪ್ತಿಯಾಗಿದೆ ಎಂದಾಗ, “ಮಾಗಡಿ ಬಾಲಕೃಷ್ಣ, ಯೋಗೇಶ್ವರ್ ಇದ್ದಾರೆ. ಅವರ ಅನುಭವ, ಅವರ ಕಸ್ಟಡಿಯಲ್ಲಿ ನಾವಿದ್ದೇವೆ. ಅವರಿಗೂ ಜವಾಬ್ದಾರಿ ಇದೆಯಲ್ಲ. ನಮ್ಮ ಜಿಲ್ಲೆಯ ಎಲ್ಲಾ ಶಾಸಕರಿಗೂ ಜವಾಬ್ದಾರಿಯಿದೆ. ಎಲ್ಲರನ್ನೂ ಕಾಪಾಡಬೇಕಿರುವುದು ನಮ್ಮ ಕರ್ತವ್ಯವಲ್ಲವೇ? ಯಾರೂ ಬರಲ್ಲ ಅದು ಬೇರೆ ವಿಚಾರ. ಯಾರೂ ಬರಲು ಆಗುವುದಿಲ್ಲ, ಮುಟ್ಟಲೂ ಆಗುವುದಿಲ್ಲ, ಮಾತನಾಡುವುದಕ್ಕೂ ಆಗುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ” ಎಂದರು.
ಈ ಹಿಂದೆಯೂ ಗುಜರಾತ್ ಚುನಾವಣೆ ಹೊತ್ತಿನಲ್ಲೂ ನೀವು ಇದೇ ರೀತಿ ಪಕ್ಷಕ್ಕೆ ನೆರವಾಗಿದ್ದೀರಿ. ನಿಮ್ಮ ಆಸೆ ಈಡೇರಲಿದೆಯೇ ಎಂದಾಗ, “ನಾನು ಇದರ ಬಗ್ಗೆ ಮಾತನಾಡುವುದಿಲ್ಲ. ಕಾದು ನೋಡೋಣ” ಎಂದರು.
ಇದರಿಂದ ನಿಮ್ಮ ಮುಂದಿನ ಹೆಜ್ಜೆ ನಿಮ್ಮ ಕನಸಿನ ಹತ್ತಿರ ಇರುತ್ತದೆಯೇ ಎಂದಾಗ, “ನಾನೇಕೆ ಕನಸು ಕಾಣಲಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಯಾವಾಗ ವಾಪಸ್ ಕರೆದುಕೊಂಡು ಹೋಗುವುದು ಎಂದಾಹ, “ಅದನ್ನ ನಾವು ತೀರ್ಮಾನ ಮಾಡುತ್ತೇವೆ ಎಂದು ಅವರು ನುಡಿದರು.



