ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ಎಸ್ ಐಟಿ ರಚನೆ ಆದಾಗ ಮೌನವಾಗಿದ್ದ ಬಿಜೆಪಿಯವರು ಎಸ್ ಐಟಿ ತನಿಖೆ ವೇಳೆ ಏನೂ ಸಿಗದೇ ಇದ್ದಾಗ ಮಾತನಾಡಲು ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಧರ್ಮಸ್ಥಳದ ಪ್ರಕರಣಗಳ ಕುರಿತು ಮೊದಲ ಬಾರಿ ಮೌನ ಮುರಿದ ಅವರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೇ ಎಸ್ ಐಟಿ ರಚನೆ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದರು.
ಧರ್ಮಸ್ಥಳ ಬಗ್ಗೆ ಈಗ ಬಿಜೆಪಿಯವರು ಚಳವಳಿ ಮಾಡುತ್ತಿದ್ದಾರೆ. ಧರ್ಮಸ್ಥಳ ತನಿಖೆ ಬಗ್ಗೆ ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಎಸ್ಐಟಿ ರಚನೆ ಮಾಡಿದಾಗ ಬಿಜೆಪಿಗರು ಮಾತನಾಡಲೇ ಇಲ್ಲ. 15 ಜಾಗದಲ್ಲಿ ಅಗೆದರು. ಒಂದು ಕಡೆ ಅಸ್ಥಿಪಂಜರ ಮತ್ತೊಂದು ಕಡೆ ಮೂಳೆಗಳು ಸಿಕ್ಕಿದ್ದು ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ ಎಂದರು.
13 ಕಡೆ ಏನೂ ಸಿಗದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದ್ದಾರೆ. ಎಸ್ ಐಟಿ ರಚನೆ ಆದಾಗ ಇದೇ ಬಿಜೆಪಿಯವರು ಸುಮ್ಮನೆ ಇದ್ದರು. ಎಸ್ ಐಟಿ ರಚನೆಯಿಂದ ಸತ್ಯ ಹೊರಗೆ ಬರಬೇಕಲ್ಲವೇ? ಎಂದು ಅವರು ಹೇಳಿದರು.
ಎಸ್ ಐಟಿ ರಚನೆ ಆದಾಗಲೇ ನಾನು ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿ ಹೇಳಿಕೆ ನೀಡಿದ್ದೆ ಎಂದು ಅಶೋಕ್ ಪ್ರತಿಕ್ರಿಯೆ ನೀಡಿದಾಗ ವಿಧಾನಸಭೆ ಅಧಿವೇಶನ ಶುರುವಾಗಿ 15 ದಿನ ಆದ ಮೇಲೆ ಮಾತಾಡ್ತಾ ಇದ್ದೀರಿ. ನಾನೇನು ಸುಮ್ಮನೆ ಕೂತಿಲ್ಲ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಇಷ್ಟು ದಿನ ಯಾಕೆ ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದೇ ವೇಳೆ ಅಶೋಕ್ ಮತ್ತೆ ಎದ್ದು ನಿಂತು ಮಾತನಾಡಲು ಹೋದಾಗ, ನಾನು ಮಾತನಾಡ್ತಾ ಇದ್ದೀನಿ. ಕುತ್ಕೋಳಪ್ಪ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ನಿಮಗೆ ಸಹಾಯ ಮಾಡೋಣ ಅಂತ ಎದ್ದೆ ಎಂದು ಅಶೋಕ್ ಹೇಳಿಕೆಗೆ, ನಿನ್ನ ಸಹಾಯ ಏನೂ ಬೇಡ. ಬೇಕಾದರೆ ಹೊರಗೆ ಬಾ ಅಲ್ಲಿ ಮಾತನಾಡೋಣ ಎಂದು ನಗುತ್ತಾ ಪ್ರತಿಕ್ರಿಯೆ ನೀಡಿದರು.



