ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಾದರೆ ಕೇಂದ್ರದಲ್ಲಿ 6 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬದಲಾವಣೆ ನಡೆಯಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಾಂಬ್ ಸಿಡಿಸಿದ್ದಾರೆ.
ಕೋಲಾರ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಧರ್ಮ ಸಂಘರ್ಷ, ಮುಸ್ಲಿಂ ವಿರುದ್ಧ ಆರೋಪ, ಹಿಂದುತ್ವ ಮುಂದಿಟ್ಟುಕೊಂಡು ಸುಳ್ಳು ಹೇಳಿಕೆ ನೀಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಎಂದಾದರು ಬಿಜೆಪಿ ನಾಯಕರ ಮಕ್ಕಳು ಪ್ರತಿಭಟನೆಗೆ ಬಂದಿದ್ದಾರೆಯೆ ಎಂದು ಪ್ರಶ್ನಿಸಿದರು.
ಮದ್ದೂರು ಗಲಭೆ ಕುರಿತು ಪ್ರತಿಕ್ರಿಯಿಸಿ, ದೇವರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಬಾರದಿತ್ತು. ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಕಾನೂನು ಪ್ರಕಾರ ಶಿಸ್ತು ಕ್ರಮ ಸರ್ಕಾರ ತೆಗೆದುಕೊಳ್ಳುತ್ತದೆ. ಆದರೆ, ಬಿಜೆಪಿಯವರು ಇದರಲ್ಲೂ ಹಿಂದೂ ಹಾಗೂ ಮುಸ್ಲಿಂ ರಾಜಕೀಯ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸೂಚಿಸಿದರೆ ಕನ್ನಡಿಗರ ರಕ್ಷಣೆಗಾಗಿ ನೇಪಾಳಕ್ಕೆ ಹೋಗಲು ಸಿದ್ಧ ನೇಪಾಳದಲ್ಲಿರುವ ಕನ್ನಡಿಗರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ತಾವು ಎಲ್ಲಿದ್ದೀರೋ ಅಲ್ಲಿ ಸುರಕ್ಷಿತವಾಗಿರಿ ಎಂದಿದ್ದೇನೆ. ಅವರನ್ನು ಕರೆತರುವ ಬಗ್ಗೆ ಮುಖ್ಯಮಂತ್ರಿ ನನಗೆ ಇನ್ನು ಯಾವುದೇ ಸೂಚನೆ ನೀಡಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಜಾರಿಗೆ ತಂದು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ. ಆರ್ಥಿಕ ಸ್ಥಿತಿಗತಿಯಲ್ಲೂ ಉತ್ತಮವಾಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಏನಾಗಿದೆ? ದೇಶದಲ್ಲಿ ಕರ್ನಾಟಕ ಮಾಡೆಲ್ ಪಾಲನೆ ಮಾಡಲಾಗುತ್ತಿದೆ ಎಂದರು.
ಭದ್ರಾವತಿ ಶಾಸಕ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿರುವ ಕುರಿತು ಪ್ರತಿಕ್ರಿಯಿಸಿ, ಹಿಂದೆ ದೇವೇಗೌಡರು ಸಹ ಇದೇ ಮಾತನ್ನು ಹೇಳಿದ್ದರು, ಭದ್ರಾವತಿ ಶಾಸಕರು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಪಾಕಿಸ್ತಾನಕ್ಕೆ ನೀರು ಬಂದ್ ಮಾಡುತ್ತಾರೆ. ಆದರೆ ಏಷ್ಯಾ ಕಪ್ ನಲ್ಲಿ ಅವರ ವಿರುದ್ಧ ಕ್ರಿಕೆಟ್ ಪಂದ್ಯ ಆಡಿಸಲು ಹೊರಟ್ಟಿದ್ದಾರೆ. ಇದರ ಅವಶ್ಯವನಿತ್ತು? ಕ್ರೀಡೆ, ಸಿನಿಮಾ ಎಂದರೆ ಅದರದ್ದೆ ದಾಟಿಯಲ್ಲಿ ನೋಡಬೇಕು, ಇಷ್ಟ ಬಂದ ಹಾಗೆ ಮಾಡಿದರೆ ಪ್ರಶ್ನೆ ಮಾಡುವವರು ಯಾರು ಇಲ್ಲ ಎಂದು ವರ್ತಿಸುವುದು ಸರಿಯಲ್ಲ ಎಂದರು.
ಈಗಲು ಗ್ರೇಟೇಸ್ಟ್ ಪ್ರಧಾನಿ ಎಂದು ಸಾಬೀತು ಪಡಿಸಲು ಹೊರಟ್ಟಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವುದು ನರೇಂದ್ರ ಮೋದಿ, ಅಡ್ವಾನಿ ಎಂದು ಛೇಡಿಸಿದರು.
ಮೋದಿ ಅವರ ಬಗ್ಗೆ ಸುಳ್ಳುಗಳು ಹೇಳಿಕೊಂಡು ಅತ್ಯುತ್ತಮ ವ್ಯಕ್ತಿ ಎಂದು ಹೇಳುವುದು ಬಿಟ್ಟರೆ ಬಿಜೆಪಿಯವರಿಗೇ ಬೇರೆನು ಗೊತ್ತಿದೆ? ಕಳೆದ ಅವಧಿಯಲ್ಲಿ ಅವರು ಮಾಡಿರುವ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಕ್ಷೇತ್ರಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಹಿಂದುತ್ವ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬಿಟ್ಟರೆ ಬಿಜೆಪಿಗೆ ಇನ್ನೇನು ಗೊತ್ತಿದೆ? ಹಿಂದೂ ಧರ್ಮದ ಬಗ್ಗೆ ಕಾಳಜಿಯಿದ್ದರೆ ಹಿಂದೂ ಸಂಸತಿಯಲ್ಲಿ ಬೇರೆ ಬೇರೆ ಸಮಾಜದವರನ್ನು ಕೀಳಾಗಿ ನೋಡುವುದನ್ನು ಬಿಟ್ಟು ಬದಲಾವಣೆಗೆ ಸಹಕರಿಸಿ ಎಂದು ಕಿವಿಮಾತು ಹೇಳಿದರು.



