ಜೈಪುರ: ಇತ್ತೀಚೆಗೆ ಅನಾರೋಗ್ಯ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಜಗದೀಪ್ ಧನ್ ಕರ್ ಮಾಜಿ ಶಾಸಕ ಕೋಟಾದಡಿ ತಮಗೆ ಸಿಗಬೇಕಿರುವ ಪಿಂಚಣಿ ನೀಡಲು ರಾಜಸ್ಥಾನದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಧನಕರ್ ಈ ಹಿಂದೆ ಕಿಶನ್ಗಢ ಕ್ಷೇತ್ರದಿಂದ 1993 ರಿಂದ 1998ರವರೆಗೆ ಕಾಂಗ್ರೆಸ್ ಶಾಸಕರಾಗಿದ್ದರು. ಆ ಬಳಿಕ 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಪಿಂಚಣಿ ಪಡೆಯುತ್ತಿದ್ದರು. ನಂತರ ಸ್ಥಗಿತಗೊಳಿಸಲಾಗಿತ್ತು.
ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಪಿಂಚಣಿ ಪುನಾರಂಭಿಸುವಂತೆ ಕೋರಿ ರಾಜಸ್ಥಾನ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಸಚಿವಾಲಯವು ಈ ಪ್ರಕ್ರಿಯೆ ಪ್ರಾರಂಭಿಸಿದ್ದು, ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಅಂಗೀಕರಿಸಲ್ಪಟ್ಟ ದಿನದಿಂದ ಪಿಂಚಣಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 74 ವರ್ಷದ ಧನಕರ್ ಮಾಸಿಕ 42 ಸಾವಿರ ರೂ. ಪಿಂಚಣಿಗೆ ಅರ್ಹರಾಗಿದ್ದಾರೆ.
ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದ ಅವರ ಈ ನಡೆ ಹಲವಾರು ಸಂಶಯಗಳು, ಗೊಂದಲಗಳಿಗೆ ಎಡೆಮಾಡಿತ್ತು. ಬಿಜೆಪಿಗೆ ತಕ್ಕಂತೆವರ್ತಿಸದ ಕಾರಣ ಅವರನ್ನು ತೆಗೆದುಹಾಕಲಾಯಿತು ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು.



