ಸುಮಾರು ಒಂದೂವರೆ ತಿಂಗಳ ಹಿಂದೆಯಷ್ಟೇ ವಲಸೆ ಬಂದಿದ್ದ ಮೂವರು ಮಕ್ಕಳು ಸೇರಿದಂತೆ 10 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಬಂಧಿಸಲಾಗಿದೆ.
ಶ್ರೀನಿವಾಸಪುರ ಪಟ್ಟಣ ಠಾಣೆ ಪೊಲೀಸರು ಗುಜುರಿ ಆರಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿದ್ದಾರೆ.
ನಂದಗುಡಿಯಲ್ಲಿ ಗುಜರಿ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಜಾಯಿದ್ ಇಸ್ಲಾಂ ಬಿನ್ ಸಿಕಂದರ್ ಔರಾದಾರ್ (23), ನಜರಲ್ ಬಿನ್ ಅಬ್ದುಲ್ ಅಜೀಸ್ (40), ಮಹಮ್ಮದ್ ಪೈಝಲ್ ಔಲಾ ದಾರ್ ಬಿನ್ ಮಹಮ್ಮದ್ ಬಾದಲ್ ಔಲಾದಾರ್ (22), ಮಹಮ್ಮದ್ ನಹಿಮ್ ಔಲಾದಾರ್ ಬಿನ್ ಮಹಮದ್ ಬಾದಲ್ ಔಲಾದಾರ್ (14), ಮುರ್ಷಿದಾ ಅಕ್ತರ್ ಕೋಂ ನಜರುಲ್ ಇಸ್ಲಾಂ (36), ಸಮೇಲಿ ಕೋಂ ಜೋಶಿಂ (28),
ಫಿರ್ ದೋಸಿ D/o ಜೊಸಿಮ್ ಮಲ್ಲಿಕ್ (6), 2 ತಿಂಗಳ ಮಗು ಕುಲ್ ಸಂ ಅಕ್ತರ್ D/o ಜೋಶಿಮ್ ಮಲ್ಲಿಕ್, ಮೈಯಿರ್ ಇಸ್ಲಾಂ ಔಲಾದಾರ್ ಬಿನ್ ನಜರುಲ್ ಇಸ್ಲಾಂ (3) ಬಂಧಿತರು.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಖಾಲಿ ಬಾಟಲಿ ಇತರೆ ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾಗ ಆತನ ಚಹರೆಯನ್ನು ಗಮನಿಸಿ ಅನುಮಾನಗೊಂಡ ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿರುವುದು ಕಂಡು ಬಂತು. ಪೊಲೀಸರಿಗೆ ಈತ ಬಾಂಗ್ಲಾದೇಶದವನಿರಬಹುದು ಎಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಎಲ್ಲ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ.
ಬಾಂಗ್ಲಾದೇಶ ದೇಶದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವನು ಎಂದು ಹೇಳಿದ್ದಾನೆ. ತನ್ನ ಹೆಸರು ಮೊಹಮ್ಮದ್ ಜಾಯಿದ್ ಇಸ್ಲಾಂ ಬಿನ್ ಸಿಕಂದರ್ ಔರಾದಾರ್ (23) ಎಂದು ಹೇಳಿದ್ದು, ಇಲ್ಲಿ ಗುಜರಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾನೆ.
ಪೊಲೀಸರು ಆತನ ಬಳಿ ಇದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಆತ ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಶ್ರೀನಿವಾಸಪುರಕ್ಕೆ ಬಂದು ನೆಲೆಸಿರುವುದು ಕಂಡು ಬಂದಿದೆ. ನಂತರ ಆತನ ಪತ್ನಿ ಮತ್ತು ಮಕ್ಕಳನ್ನು ಸಹ ವಶಕ್ಕೆ ಪಡೆದುಕೊಂಡು ಅವರನ್ನು ಮತ್ತಷ್ಟು ವಿಚಾರಣೆ ಮಾಡಿದಾಗ ಇವರ ಜೊತೆಗೆ ಇನ್ನೂ ಎಂಟು ಜನರು ಬಂದಿರುವುದು ಪೊಲೀಸರಿಗೆ ಗೊತ್ತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಭಾಗದಲ್ಲಿ ವಾಸಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ತಡರಾತ್ರಿ ದಾಳಿ ಮಾಡಿ ಅಲ್ಲಿದ್ದ ಸುಮಾರು ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಅವರ ಬಳಿ ಇರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಪ್ರಾಥಮಿಕ ವಿಚಾರಣೆ ವೇಳೆ ಅವರೆಲ್ಲರೂ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ.
ಈ ಬಗ್ಗೆ ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ. ಬದಲಾಗಿ ಅವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ. ಸದ್ಯ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಿ, ನಾಲ್ವರು ಮಕ್ಕಳು, ಮೂವರು ಮಹಿಳೆಯರು, ಐದು ಜನರ ಪುರುಷರು ಇದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



