Tuesday, July 21, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಫುಟ್ ಪಾತ್ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಕರ್ನಾಟಕ ಸೇನೆ ಮುಖಂಡ ಸೇರಿ...

ಬೆಂಗಳೂರಿನಲ್ಲಿ ಫುಟ್ ಪಾತ್ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಕರ್ನಾಟಕ ಸೇನೆ ಮುಖಂಡ ಸೇರಿ 10 ಮಂದಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಪ್ರಮುಖ ಬಡಾವಣೆಯಾದ ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಕರ್ನಾಟಕ ಸೇನೆ ಮುಖಂಡ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.

ನಮ್ಮ ಕರ್ನಾಟಕ ಸೇನೆ ಸಂಘಟನೆಯ ಬಸವರಾಜ್ ಪಡುಕೋಟೆ, ಕೊಟ್ರೇಶ್ (24), ಭರತ್ (24), ರಘು (28), ರಂಜನ್ (19), ಮುಜಾಹಿದ್ ಮೊಹಮದ್ (39), ಪಾಪಣ್ಣ (23), ರಂಗಸ್ವಾಮಿ (49), ಚಾಮರಾಜಪೇಟೆಯ ಕಿರಣ್ ಸಾಯಕ, ಬಸವರಾಜ್ (28), ಪರಶುರಾಮ್ (29) ಅವರನ್ನು ಬಂಧಿಸಲಾಗಿದೆ.

ನಗರದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಫುಟ್ ಪಾತ್ ತೆರವು ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದ್ದು, ಅತ್ಯಂತ ಗಿಜಿಗುಡುವ ಹಾಗೂ ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

ಬಸ್ ಸ್ಟ್ಯಾಂಡ್ ಬಳಿ ಬೆಳಿಗ್ಗೆಯಿಂದ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ  ಮಧ್ಯಾಹ್ನ 12:30ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ಬಂದ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ಏಕಾಏಕಿ ಅಧಿಕಾರಿಗಳ ಮೇಲೆ ಮುಗಿಬಿದ್ದಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವ್ ರಾವ್ ಅವರ ಮೇಲೆ ಅಪರಿಚಿತರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ತಳ್ಳಿದ ರಭಸಕ್ಕೆ ಅಧಿಕಾರಿ ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಹೆಲ್ಮೆಟ್ ಹಾಗೂ ಪ್ಲಾಸ್ಟಿಕ್ ಚೇರ್‌ಗಳಿಂದ ಮನಸೋಇಚ್ಛೆ ಹೊಡೆಯಲಾಗಿದೆ.

ನಮ್ಮ ಕರ್ನಾಟಕ ಸೇನೆ ಸಂಘಟನೆಯ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಮಹಿಳಾ ಅಧಿಕಾರಿಯೊಬ್ಬರ ಮುಖದ ಹತ್ತಿರವೇ ಬಂದು ಪೆಪ್ಪರ್ ಸ್ಪ್ರೇ ಮಾಡಿ ಭಯಾನಕ ವಾತಾವರಣ ಸೃಷ್ಟಿಸಿದ್ದಾರೆ.

ಮುಖದ ಹತ್ತಿರ ಬಂದು ಪೆಪ್ಪರ್ ಸ್ಪ್ರೇ ಮಾಡಿದ್ರು. ನಾವು ಜೀವಭಯದಿಂದ ಓಡಿ ಅಡಗಿಕೊಂಡೆವು. ನಮಗೆ ಕೆಲಸ ಮಾಡಲು ಭಯವಾಗುತ್ತಿದೆ, ತಕ್ಷಣ ಸೂಕ್ತ ರಕ್ಷಣೆ ಬೇಕು” ಎಂದು ಮಹಿಳಾ ಅಧಿಕಾರಿ ಸಾವಿತ್ರಿ ನೋವು ತೋಡಿಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ನಾಲ್ಕು ಜನ ಪೊಲೀಸರಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ವೀಡಿಯೋ ಮಾಡುತ್ತಾ ನಿಂತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವಾಗ ಪೊಲೀಸರು ಅಲರ್ಟ್ ಆಗಿರಬೇಕಿತ್ತು ಎಂದು ಜಿಬಿಎ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ.

ಜಿಬಿಎ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಸವರಾಜ್ ಪಡುಕೋಟೆ ಕನ್ನಡಪರ ಸಂಘಟನೆಯ ಹೆಸರು ಹೇಳಿಕೊಂಡು ಸ್ಥಳೀಯ ವ್ಯಾಪಾರಿಗಳಿಂದ ನಿಯಮಿತವಾಗಿ ಮಾಮೂಲಿ ವಸೂಲಿ ಮಾಡುತ್ತಿದ್ದ. ಒತ್ತುವರಿ ತೆರವುಗೊಂಡರೆ ಆತನ ಹಫ್ತಾ ಬಂದ್ ಆಗುತ್ತದೆ ಎಂಬ ಕಾರಣಕ್ಕೆ ಈ ಮಾರಣಾಂತಿಕ ದಾಳಿ ನಡೆಸಿದ್ದಾನೆ” ಎಂದು ನೇರ ಆರೋಪ ಮಾಡಿದ್ದಾರೆ.

ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಬಿಎ ನೌಕರರ ಸಂಘವು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಹಲ್ಲೆ ನಡೆಸಿದ ಬಸವರಾಜ್ ಪಡುಕೋಟೆ ಸೇರಿದಂತೆ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರನ್ನು ಬಂಧಿಸದಿದ್ದರೆ ನಾಳೆಯಿಂದ ಎಸ್‌ಐಆರ್ (SIR) ಮತ್ತು ಫುಟ್‌ಪಾತ್ ತೆರವು ಕಾರ್ಯಾಚರಣೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಚ್ಚರಿಕೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments