ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಸಂಭವಿಸುವ ಅಪಘಾತಗಳು ಮುಂದುವರೆದಿದ್ದು, ಗುರುವಾರ ಒಂದೇ ದಿನ ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ವೃದ್ಧರು ಬಲಿಯಾಗಿದ್ದಾರೆ.
ನಡೆದುಕೊಂಡು ಹೋಗುತ್ತಿದ್ದ ತರಕಾರಿ ವ್ಯಾಪಾರಿಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್ ಆತನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ನಡೆದಿದೆ.
ಬೊಮ್ಮನಹಳ್ಳಿ ರೂಪೇನಾ ಅಗ್ರಹಾರದ ವೆಂಕಟರಾಮಯ್ಯ (63) ಮೃತಪಟ್ಟರು, ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದ ವೆಂಕಟರಾಮಯ್ಯ ಮಡಿವಾಳ ಮಾರ್ಕೆಟ್ಗೆ ಸೊಪ್ಪು ಖರೀದಿಸಲು ಬಂದಿದ್ದರು.
ವ್ಯಾಪಾರ ಮುಗಿಸಿಕೊಂಡು ಬೆಳಿಗ್ಗೆ 6.30 ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಬಸ್ ಮುಂದೆ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಗುದ್ದಿದ ಬಳಿಕ ವೆಂಕಟರಾಮಯ್ಯ ಅವರಿಗೆ ಡಿಕ್ಕಿ ಹೊಡೆದಿದೆ.
ಬಸ್ನ ಚಕ್ರ ವೆಂಕಟರಾಮಯ್ಯ ಮೇಲೆ ಹರಿದ ಪರಿಣಾಮ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ
ವೃದ್ಧೆ ಸಾವು:
ಗೋವಿಂದರಾಜನಗರದ ಸರ್ವಜ್ಞ ಪಬ್ಲಿಕ್ ಶಾಲೆ ಬಳಿ ವೃದ್ಧೆ ಮೇಲೆ ಬಿಎಂಟಿಸಿ ಹರಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ.
ಸುಶೀಲಾ (61) ಮೃತಪಟ್ಟವರು. ಬಸ್ನಿಂದ ಇಳಿದು ಬಲಭಾಗದ ರಸ್ತೆ ದಾಟುವಾಗ ಆಯತಪ್ಪಿ ಬಿದ್ದ ಪರಿಣಾಮ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಸ್ಗೆ ಸಿಲುಕಿದ್ದಾರೆ. ಬಸ್ ಚಕ್ರ ವೃದ್ಧೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.



