ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಮಲಯಾಳಂ ಖ್ಯಾತ ನಟ ಜಯಕೃಷ್ಣನ್ ಸೇರಿದಂತೆ ಮೂವರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೆ.9ರಂದು ಮಂಗಳೂರಿಗೆ ಭೇಟಿ ನೀಡಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಅವರನ್ನು ಊರ್ವ ಪೊಲೀಸರು ಬಂಧಿಸಿದ್ದಾರೆ.
ಜಯಕೃಷ್ಣನ್ ಹಾಗೂ ಸ್ನೇಹಿತರು ಮಂಗಳೂರಿಗೆ ಭೇಟಿ ನೀಡಿದಾಗ ಊಬರ್ ಕ್ಯಾಬ್ ಬುಕ್ ಮಾಡಿದ್ದರು. ಚಾಲಕ ಶಫೀಕ್ ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು.
ಚಾಲಕ ಮುಸ್ಲಿಂ ಎಂದು ಗೊತ್ತಾದಾಗ ಅಪ್ಪ-ಅಮ್ಮನಿಗೆ ಬೈದಿದ್ದಾರೆ. ‘ಮುಸ್ಲಿಂ ತೀರ್ವವಾದಿ, ಟೆರರಿಸ್ಟ್ ಎಂದು ಅಪಹಾಸ್ಯ ಮಾಡಿ ನಿಂದಿಸಿದ್ದಾರೆ. ಅವರಿಗೆ ಕಾರು ಬೇಡ. ಕ್ಯಾಬ್ನವರನ್ನು ಆಟ ಆಡಿಸೋಕೆ ಈ ರೀತಿ ಮಾಡಿದ್ದಾರೆ ಎಂದು ರಫೀಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಅನೇಕ ಕ್ಯಾಬ್ ಚಾಲಕರಿಗೆ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಕಾರು ಚಾಲಕ 500 ಮೀಟರ್ ದೂರದಲ್ಲಿರುವಾಗ ರೈಡ್ ಕ್ಯಾನ್ಸಲ್ ಮಾಡುತ್ತಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನ್ ಲೈನ್ ಟ್ಯಾಕ್ಸಿ ಚಾಲಕರ ಸಂಘ ಮಾಡಿತ್ತು. ಈಗ ಜಯಕೃಷ್ಣನ್ ಅವರ ಬಂಧನ ಆಗಿದೆ.
ಜಯಕೃಷ್ಣನ್ 1994ರಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು, ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.



