ದೇಶಾದ್ಯಂತ ಸೈಬರ್ ದಾಳಿಯಿಂದ ನಾಗರಿಕರು 22,845 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.206ರಷ್ಟು ಹೆಚ್ಚಳವಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
2024 ರಲ್ಲಿ, NCRP ಮತ್ತು CFCFRMS ನಲ್ಲಿ 36,37,288 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆ 24,42,978 ಆಗಿತ್ತು ಎಂದು ಅವರು ಹೇಳಿದರು.
ಜುಲೈ 22ರಂದು ಲೋಕಸಭೆಯಲ್ಲಿ ದೇಶವನ್ನು ಕಾಡುತ್ತಿರುವ ಸೈಬರ್ ಅಪರಾಧಗಳ ಕುರಿತು ಅಂಕಿ ಅಂಶ ನೀಡಿದ ಅವರು, ಕಳೆದ ವರ್ಷ ಸೈಬರ್ ದಾಳಿಯಿಂದ 7465.18 ಕೋಟಿ ಕಳೆದುಕೊಂಡಿದರೆ, ಈ ವರ್ಷ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ನಾಗರಿಕರು 22,845 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದರು.
ಅಂಕಿ-ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಸೈಬರ್ ಅಪರಾಧಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. 2022ರಲ್ಲಿ 10,29,026 ಪ್ರಕರಣಗಳು ವರದಿಯಾಗಿದ್ದರೆ, 2023ರಲ್ಲಿ 15,96,493 ಕ್ಕೆ (ಶೇ.55 ಹೆಚ್ಚಳ) ಏರಿಕೆಯಾಗಿದೆ. 2024 ರಲ್ಲಿ 22,68,346 ಪ್ರಕರಣಗಳು ವರದಿಯಾಗಿವೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 42 ರಷ್ಟು ಹೆಚ್ಚಾಗಿದೆ.
ಸೈಬರ್ ಅಪರಾಧ ತಡೆಗಟ್ಟಲು ಸರ್ಕಾರ ಹಲವು ಹಂತಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. ಇಲ್ಲಿಯವರೆಗೆ, ಪೊಲೀಸರು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ 9.42 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ, 2,63,348 ಮೊಬೈಲ್ IMEI ಸಂಖ್ಯೆಗಳನ್ನು ಮುಚ್ಚಲಾಗಿದೆ. 11 ಲಕ್ಷ ಅನುಮಾನಾಸ್ಪದ ಡೇಟಾವನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ.
ಸೈಬರ್ ದಾಳಿಯ ಡಿಜಿಟಲ್ ನಕ್ಷೆ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚುವ ಕೇಂದ್ರ ಸರ್ಕಾರ ಪ್ರತಿಬಿಂಬ ಮಾಡ್ಯೂಲ್ ಆರಂಭಿಸಿದ್ದು, 24 ಲಕ್ಷ ಮ್ಯೂಲ್ ಖಾತೆಗಳನ್ನು (ನಕಲಿ ಖಾತೆಗಳು) ಗುರುತಿಸಲಾಗಿದೆ ಮತ್ತು ಅವುಗಳ ಮೂಲಕ 4,631 ಕೋಟಿ ರೂ.ಗಳನ್ನು ಉಳಿಸಲಾಗಿದೆ. ಈ ಮಾಡ್ಯೂಲ್ ಸಹಾಯದಿಂದ 10,599 ಆರೋಪಿಗಳನ್ನು ಬಂಧಿಸಲಾಗಿದೆ.
ಸೈಬರ್ ದಾಳಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?
2021 ರಲ್ಲಿ ಪ್ರಾರಂಭಿಸಲಾದ CFCFRMS ಪೋರ್ಟಲ್ ಮೂಲಕ, ಇಲ್ಲಿಯವರೆಗೆ 5,489 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಂಚಕರ ಕೈಗೆ ಸಿಲುಕದಂತೆ ಉಳಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಆನ್ಲೈನ್ ವಹಿವಾಟುಗಳನ್ನು ಮಾಡುವಾಗ ಜನರು ಬಹಳ ಜಾಗರೂಕರಾಗಿರಬೇಕು ಎಂದು ಸಚಿವಾಲಯವು ಮನವಿ ಮಾಡಿದೆ. ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ರೀತಿಯ ವಂಚನೆ ಸಂಭವಿಸಿದಲ್ಲಿ, ತಕ್ಷಣವೇ NCRP ಪೋರ್ಟಲ್ನಲ್ಲಿ ಅಥವಾ ಪೊಲೀಸರಿಗೆ ದೂರು ನೀಡಿ.