ಬೆಂಗಳೂರು: ಉತ್ತರ ಕರ್ನಾಟಕದ ಭಾಗದ ಹಲವೆಡೆ ಮಳೆ ಸೂಕ್ತ ಸಮಯದಲ್ಲಿ ಕೈ ಕೊಟ್ಟಿದ್ದರಿಂದ ಭತ್ತದ ಉತ್ಪಾದನೆಯಲ್ಲಿ ಏರುಪೇರಾಗಲಿದ್ದು, ಇದರಿಂದ ರಾಜ್ಯದಲ್ಲಿ ಅಕ್ಕಿ ದರ ಏರಿಕೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಭತ್ತದ ಕಣಜ ಎನ್ನಿಸಿರುವ ರಾಯಚೂರು-ಕೊಪ್ಪಳ-ಬಳ್ಳಾರಿ ಭಾಗದಲ್ಲಿ ಸತತ ಎರಡನೇ ವರ್ಷವೂ ಭತ್ತದ ಬೆಳೆಗೆ ನೀರಿಲ್ಲದೇ ಅಕ್ಕಿ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ವಾರದ ಹಿಂದೆಯಷ್ಟೇ ಅಕ್ಕಿ ಏರಿಕೆಯಾಗಿದ್ದು. ಇನ್ನಷ್ಟು ಏರಿಕೆಯಾಗುವ ಲಕ್ಷಗಳು ಕಾಣುತ್ತಿವೆ. ಮೈಸೂರು, ಮಂಡ್ಯ, ದಾವಣಗೆರೆ ನಭಾಗದ ರೈತರು ಭತ್ತದ ಬಿತ್ತನೆ ಮಾಡುವ ಸಾಹಸಕ್ಕೆ ಹೋಗಿಲ್ಲ.
ಎಲ್ಲಿ ಎಷ್ಟು ಬಿತ್ತನೆ
ಕರ್ನಾಟಕದಲ್ಲಿ 2026-27ನೇ ಸಾಲಿನಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಆಗಬೇಕಾಗಿತ್ತು. ಆದರೆ ಮಳೆ ಕೊರತೆ, ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಬರೀ 2.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಶೇ 20ರಷ್ಟು ಬಿತ್ತನೆಯಾಗಿಲ್ಲ.
ಅತಿ ಹೆಚ್ಚು ಭತ್ತ ಬೆಳೆಯುವ ರಾಯಚೂರು ಜಿಲ್ಲೆಯಲ್ಲಿ ಕೇವಲ ಶೇ, 2ರಷ್ಟು ಮಾತ್ರ ಈವರೆಗೂ ಬಿತ್ತನೆಯಾಗಿದೆ. ರಾಯಚೂರು ಜಿಲ್ಲೆಯ 1,90,638 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದರೆ, ಬಿತ್ತನೆಯಾಗಿರುವುದು ಬರೀ 4020 ಹೆಕ್ಟೇರ್ ಮಾತ್ರ, ಬಳ್ಳಾರಿ ಜಿಲ್ಲೆಯ 87741 ಹೆಕ್ಟೇರ್ ಪ್ರದೇಶದಲ್ಲಿ ಬರೀ 6397 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು ಶೇ 10ರಷ್ಟು ಗುರಿ ಮುಟ್ಟಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಶೇ 1, ಶಿವಮೊಗ್ಗ ಜಿಲ್ಲೆಯಲ್ಲಿ ಶೇ 10, ಯಾದಗಿರಿ ಜಿಲ್ಲೆಯಲ್ಲಿ ಶೇ 20, ಕೊಪ್ಪಳ ಜಿಲ್ಲೆಯಲ್ಲಿ ಶೇ 22ರಷ್ಟು ಬಿತ್ತನೆಯಾಗಿದ್ದರೆ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಬಿತ್ತನೆಯನ್ನೇ ಮಾಡಿಲ್ಲ. ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ತಲಾ ಶೇ 7ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 12 ಮಾತ್ರ ಬಿತ್ತನೆ ಪೂರ್ಣಗೊಂಡಿದೆ.
ಅಕ್ಕಿ ದರದಲ್ಲಿ ಏರಿಕೆ
ಈ ನಡುವೆ ಭತ್ತದ ಉತ್ಪಾದನೆ ಕಡಿಮೆಯಾಗಿರುವುದರಿಂದ ಅಕ್ಕಿಯ ದರದಲ್ಲಿ ಏರಿಕೆಯಾಗಿದೆ. ಒಂದು ವಾರದ ಅವಧಿಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಸೋನಾ ಮಸೂರಿ ಸಹಿತ ವಿವಿಧ ಅಕ್ಕಿ ಮಾರಾಟ ದರವು ಕೆಜಿಗೆ ₹8 ರಿಂದ ₹10 ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಆತಂಕವಿದೆ.
ಹಿಂದಿನಿಂದಲೂ ಕರ್ನಾಟಕದಲ್ಲಿ ಬೆಳೆಯ ಭತ್ತವನ್ನು ಅಕ್ಕಿ ಮಾಡಿಸಿ ಮಾರಾಟ ಮಾಡುವ ವ್ಯವಸ್ಥೆಯಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಅಕ್ಕಿ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಹೊಸ ಅಕ್ಕಿ ಹಾಗೂ ಹಳೆಯ ಅಕ್ಕಿಗೆ ದರ ವ್ಯತ್ಯಾಸ ಇರುತ್ತದೆ. ಈ ಬಾರಿ ಆಂಧ್ರ, ತೆಲಂಗಾಣದಲ್ಲೂ ಮಳೆ ಕೊರತೆ ಆಗಿ ಅಲ್ಲಿಯೂ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಕರ್ನಾಟಕಕ್ಕೆ ಅಲ್ಲಿಂದ ಅಕ್ಕಿ ಬರುತ್ತಿಲ್ಲ. ಈ ಕಾರಣದಿಂದಲೂ ಅಕ್ಕಿ ದರದಲ್ಲಿ ಏರಿಕೆ ಕಂಡು ಬಂದಿದೆ.
ನಾನು 40 ವರ್ಷದಿಂದ ಅಕ್ಕಿ ವ್ಯಾಪಾರದಲ್ಲಿ ತೊಡಗಿದ್ದೇನೆ. ಆದರೆ ದರ ಈ ರೀತಿ ಏರಿಕೆಯಾಗಿರುವುದು ಇದೇ ಮೊದಲು. ಭತ್ತದ ಬಿತ್ತನೆ ಪ್ರಮಾಣವೂ ಕಡಿಮೆಯಾಗಿರುವುದು ಉತ್ಪಾದನೆ ಕಡಿಮೆಯಾಗಲು ದಾರಿಯಾಗಿದೆ. ಕೃಷಿ ಇಲಾಖೆ ಈ ವಿಚಾರದಲ್ಲಿ ರೈತರಲ್ಲಿ ಜಾಗೃತಿ ಇನ್ನಷ್ಟು ಹೆಚ್ಚಿಸಬೇಕು ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹೇಮಯ್ಯ ಸ್ವಾಮಿ ಹೇಳುತ್ತಾರೆ.



