ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್ ಪುನರಾಯ್ಕೆಯಾಗಿದ್ದಾರೆ.
ಖಚಾಂಚಿಯಾಗಿ ರಾಜಶೇಖರ ಎಂ.ಹೊನ್ನಪ್ಪನವರ, ಉಪಾಧ್ಯಕ್ಷರುಗಳಾಗಿ ಪದ್ಮಲತಾ .ಜಿ ಮತ್ತು ಮಾರುತೇಶ್ ಆರ್, ಸಹ ಕಾರ್ಯದರ್ಶಿಗಳಾಗಿ ಪ್ರಮೀಳಾ ತಿಪ್ಪಣ್ಣ ಕಾಮನಹಳ್ಳಿ ಮತ್ತು ಜಯಾ.ರಾ.ಹೆಬಳಿ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರೇಶ್ ಬಿ.ಎನ್.ಆಯ್ಕೆಯಾಗಿದ್ದಾರೆ.
ಗುರುವಾರ ಗಾಂಧಿನಗರದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುನರ್ ಆಯ್ಕೆಗೊಂಡ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ಹಿಂಪಡೆದಿದ್ದರಿಂದ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಪುನರ್ ಚಾಲನೆ ದೊರೆಯಿತು. ಮೇ 16ರಿಂದ 18ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.19ರಂದು ನಾಮಪತ್ರ ಪರಿಶೀಲನೆ ನಡೆಸಲಾಗಿತ್ತು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು, ಇದರಲ್ಲಿ ಅಣ್ಣಪ್ಪ ಎಂಬುವವರು ನಾಮಪತ್ರ ವಾಪಾಸ್ ಪಡೆದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲದ್ದರಿಂದ ಅದರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಒಟ್ಟಿನಲ್ಲಿ ಎಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿವೆ ಎಂದು ಮಾಹಿತಿ ನೀಡಿದರು.
ಎಲ್ಲ ಜಿಲ್ಲಾ ಘಟಕ, ತಾಲೂಕು ಘಟಕಗಳಿಗೆ ಸಂಘದ ನಿಯಮನುಸಾರ ಚುನಾವಣೆ ನಡೆಸಲಾಗಿದೆ. ಒಟ್ಟು ರಾಜ್ಯದೆಲ್ಲೆಡೆ ನಡೆದ ಎರಡು ಹಂತದ ಚುನಾವಣೆಯಲ್ಲಿ 239 ತಾಲೂಕು ಘಟಕಗಳಿಂದ ಒಟ್ಟು 2493 ನಿರ್ದೇಶಕರು ಆಯ್ಕೆಗೊಂಡಿದ್ದು, ಇದರಲ್ಲಿ ರಾಜ್ಯಮಟ್ಟದ ಒಂಬತ್ತು ಮಂದಿ ಪದಾಧಿಕಾರಿಗಳನ್ನು ಚುನಾಯಿಸಲಿದ್ದಾರೆ ಎಂದು ತಿಳಿಸಿದರು.
ಸುಮಾರು 15ಸಾವಿರ ಶಿಕ್ಷಕರಿಗೆ ಬಡ್ತಿ ನೀಡುವ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು, ಇದರಲ್ಲಿ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕ ಬಡ್ತಿ, ಅದಕ್ಕೆ ಸಂಬಂಧಿಸಿದ ವೇತನ ನಿಗಧಿ ಪ್ರಮುಖ ಬೇಡಿಕೆಯಾಗಿದೆ. 2021ರಿಂದ ಹೈಸ್ಕೂಲ್ ಶಿಕ್ಷಕರಿಗೆ ಬಡ್ತಿ ನೀಡಲಾಗಿಲ್ಲ, ಇನ್ನೊಂದು ವಾರದೊಳಗೆ ಈ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ತಿಳಿಸಿದೆ ಎಂದು ಚಂದ್ರಶೇಖರ್ ನುಗ್ಗಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್ ಮಾತನಾಡಿ ನೂತನ ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.



