ಮಂಗಳೂರು: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಆರೋಪ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ವಶಪಡಿಸಿಕೊಂಡಿದ್ದ ಸೊತ್ತುಗಳ ಸಹಿತ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಬುಧವಾರ ಮಧ್ಯಾಹ್ನ ಸಲ್ಲಿಸಿದೆ.
ಎಸ್ಐಟಿ ಅಧಿಕಾರಿಗಳು ಮಧ್ಯಾಹ್ನ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಅಧಿಕಾರಿಗಳು ಒಂದು ವರ್ಷದ ಬಳಿಕ ಒಟ್ಟು 12 ಕಡತಗಳನ್ನು ಒಳಗೊಂಡಿರುವ 7 ಸಾವಿರಕ್ಕೂ ಅಧಿಕ ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯೊಂದಿಗೆ ವಿಡಿಯೋ ಹೇಳಿಕೆ ರೆಕಾರ್ಡ್ ಮಾಡಿದ ಹಾರ್ಡ್ಡಿಸ್ಕ್ ಅನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಸಂದರ್ಭದಲ್ಲಿ ಒಟ್ಟು 255 ಸಾಕ್ಷಿಗಳ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ, ಮಾನವನ ಬುರುಡೆ, ಅಸ್ಥಿಪಂಜರ, ಮೊಬೈಲ್ ಫೋನ್ಗಳು, ದಾಖಲೆಗಳು ಸೇರಿದಂತೆ ಎಫ್ಎಸ್ಎಲ್ಗೆ ಹೋಗಿ ಬಂದ ಎಲ್ಲಾ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಚಾರಣೆ ಮುಂದೂಡಿಕೆ:
ಪ್ರಕರಣದ ದೂರುದಾರ ಚಿನ್ನಯ್ಯ ಕೂಡ ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಪತ್ನಿಯೊಂದಿಗೆ ಆಗಮಿಸಿದ್ದನು. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಚಿನ್ನಯ್ಯನ ವಿಚಾರಣೆ ಇತ್ತು. ನ್ಯಾಯಾಲಯವು ಆಗಸ್ಟ್ 29ಕ್ಕೆ ಚಿನ್ನಯ್ಯನ ವಿಚಾರಣೆಯನ್ನು ಮುಂದೂಡಿದೆ.



