ಪೆಟ್ರೋಲಿಯಂ ಸಚಿವರಾಗಿದ್ದಾಗ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ 1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ನಾಯಕ ಅರ್ಜುನ್ ರಣತುಂಗಾ ಅವರ ಬಂಧನಕ್ಕೆ ಸರ್ಕಾರ ಮುಂದಾಗಿದೆ.
ಅರ್ಜುನ್ ರಣತುಂಗಾ ಹಾಗೂ ಅವರ ಸೋದರ ದೀರ್ಘಕಾಲದವರೆಗೆ ತೈಲ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ 800 ದಶಲಕ್ಷ ಶ್ರೀಲಂಕಾ ರೂಪಾಯಿ (ಅಂದಾಜು 23.5 ಕೋಟಿ ರೂ) ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2017ರ ಅವಧಿಯಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಅರ್ಜುನ್ ರಣತುಂಗಾ ಮಾಡಿದ ಭ್ರಷ್ಟಾಚಾರದಿಂದ 27 ಕಡೆ ಖರೀದಿಯಿಂದ ನಷ್ಟವುಂಟಾಗಿದೆ. ರಣತುಂಗ ಮಾಡಿದ ಭ್ರಷ್ಟಾಚಾರದಿಂದ ಸರ್ಕಾರ ನಷ್ಟಕ್ಕೆ ಒಳಗಾಗಿದೆ ಎಂದು ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಹೇಳಿಕೆ ನೀಡಿದ್ದಾರೆ.
ಪ್ರಸ್ತು ವಿದೇಶೀ ಪ್ರವಾಸದಲ್ಲಿರುವ ಅರ್ಜುನ್ ರಣತುಂಗಾ ಸ್ವದೇಶಕ್ಕೆ ಮರಳುತ್ತಿದ್ದಂತೆ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಲಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮುಖ್ಯಸ್ಥರಾಗಿದ್ದ ರಣತುಂಗಾ ಅವರ ಸೋದರ ಧಮ್ಮಿಕಾ ರಣತುಂಗಾ ಅವರನ್ನು ಈಗಾಗಲೇ ತನಿಖಾಧಿಕಾರಿಗಳು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ನ್ಯಾಯಾಲಯ ದೇಶ ತೊರೆಯದಂತೆ ಧಮ್ಮಿಕಾ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಮಾರ್ಚ್ 13ರಂದು ವಿಚಾರಣೆ ನಿಗದಿಪಡಿಸಿದೆ.
62 ವರ್ಷದ ಅರ್ಜುನ್ ರಣತುಂಗಾ 1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಆಸ್ಟ್ರೇಲಿಯಾವನ್ನು ಫೈನಲ್ ಮಣಿಸಿ ಶ್ರೀಲಂಕಾ ಜಾಗತಿಕ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಬರೆದಿತ್ತು.



