ಚೆನ್ನೈ: ತಮಿಳುನಾಡು ಸರ್ಕಾರ ಭಕ್ತರು ದೇವರಿಗೆ ಅರ್ಪಿಸಿ ಬಳಸದೇ ಇರಿಸಲಾಗಿದ್ದ 21 ದೇವಾಲಯಗಳಲ್ಲಿದ್ದ ಸುಮಾರು 1 ಟನ್ ಗೂ (ಒಂದು ಸಾವಿರ ಕೆಜಿಗೂ ಅಧಿಕ) ಅಧಿಕ ಚಿನ್ನವನ್ನು ಕರಗಿಸಿ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದೆ
ದೇವಸ್ಥಾನಗಳಲ್ಲಿ ಇರಿಸಿದ್ದ ಚಿನ್ನವನ್ನು 24 ಕ್ಯಾರಟ್ ಬಿಸ್ಕತ್ ಗಳಾಗಿ ಪರಿವರ್ತಿಸಿದ 1 ಟನ್ ಗೂ ಅಧಿಕ ಚಿನ್ನವನ್ನು ಬ್ಯಾಂಕುಗಳಲ್ಲಿ ಠೇವಣಿ (ಚಿನ್ನದ ಹೂಡಿಕೆ) ಇಡಲಾಗಿದೆ ಎಂದು ತಮಿಳುನಾಡಿನ ಮುಜರಾಯಿ ಇಲಾಖೆ ತಿಳಿಸಿದೆ.
ಬ್ಯಾಂಕ್ ಗಳಲ್ಲಿ ಚಿನ್ನವನ್ನು ಠೇವಣಿಯಾಗಿ ಇರಿಸಿರುವುದರಿಂದ ಸರ್ಕಾರಕ್ಕೆ ವಾರ್ಷಿಕ 17.82 ಕೋಟಿ ರೂ. ಬಡ್ಡಿ ಬರುತ್ತದೆ. ಈ ಬಡ್ಡಿ ಹಣವನ್ನು ಸಂಬಂಧಿತ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಕಳೆದ ಮಾರ್ಚ್ 31ರಂದು ಎಲ್ಲ ಚಿನ್ನವನ್ನು (10,74,123.488 ಗ್ರಾಂಗಳು) ಠೇವಣಿ ಇಡಲಾಗಿದೆ ಎಂದು ತಮಿಳುನಾಡು ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ತಿಳಿಸಿದ್ದಾರೆ.
ತಮಿಳುನಾಡಿನ 21 ಹಿಂದೂ ದೇವಾಲಯಗಳಿಗೆ ಈ ಎಲ್ಲ ಚಿನ್ನ ಸೇರಿದೆ. ಅದರಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂನ ‘ಅರಳ್ಮಿಗು ಮಾರಿಯಮ್ಮನ್’ ದೇವಾಲಯದ ಚಿನ್ನವೇ ಜಾಸ್ತಿ ಇದೆ. 426.26 ಕೆ.ಜಿ ಚಿನ್ನವನ್ನು ಆ ದೇವಾಲಯದವರು ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಭಕ್ತರು ದೇವಾಲಯಗಳಿಗೆ ಆಭರಣ ಅಥವಾ ಬೇರೆ ರೂಪದಲ್ಲಿ ನೀಡಲಾದ ಚಿನ್ನವನ್ನು ಟಂಕಸಾಲೆಯಲ್ಲಿ ಕರಗಿಸಿ ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಲಾಗಿದೆ. ಇವುಗಳು ದೇವರು/ದೇವತೆಗಳಿಗೆ ಬಳಸದೇ ತೆಗೆದು ಇಟ್ಟಿದ್ದ ಚಿನ್ನವನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಶೇಖರ್ ಬಾಬು ತಿಳಿಸಿದ್ದಾರೆ.
ಈ ಕಾರ್ಯವನ್ನು ಮೇಲುಸ್ತುವಾರಿ ಮಾಡಲು ಮೂರು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಗೂ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ. ದೇವಾಲಯಗಳನ್ನು ಪ್ರಾದೇಶಿಕವಾರು ವಿಂಗಡಿಸಿ ಸಮಿತಿಗಳನ್ನು ನೇಮಿಸಲಾಗಿದೆ ಎಂದು ಬಾಬು ತಿಳಿಸಿದ್ದಾರೆ.



