ನಟ ದರ್ಶನ್, ನಟಿ ಪವಿತ್ರಾಗೌಡ ಹಾಗೂ ಸಹಚರರ ವಿರುದ್ಧದ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಕುರಿತ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 10ಕ್ಕೆ ಮುಂದೂಡಿದೆ.
ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಫ್ರೇಮ್ ಕುರಿತು ವಿಚಾರಣೆ ನಡೆಸಬೇಕಿತ್ತು. ಆದರೆ ಜನದಟ್ಟಣೆ ಕಾರಣ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.
ವಾದ-ಪ್ರತಿವಾದ ಮಾಡುವ ವಕೀಲರು ಹೊರತುಪಡಿಸಿ ಉಳಿದವರು ಕೋರ್ಟ್ ನಿಂದ ಹೊರಗೆ ಹೋಗುವಂತೆ ನ್ಯಾಯಾಧೀಶರು ಸೂಚಿಸಿದರೂ ಜನದಟ್ಟಣೆ ಕಡಿಮೆ ಆಗಲಿಲ್ಲ.
ವಿಚಾರಣೆಯನ್ನು ಮುಚ್ಚಿದ ನ್ಯಾಯಾಧೀಶರ ಚೇಂಬರ್ ನಲ್ಲಿಯೇ ನಡೆಸುವಂತೆ ವಕೀಲರು ಮನವಿ ಮಾಡಿದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂಬ ಕಾರಣಕ್ಕೆ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಲು ನಿರ್ಧರಿಸಿದರು.
ಈ ವೇಳೆ ಆರೋಪಿಗಳ ವಿರುದ್ಧ ದಾಖಲಿಸಿದ ದೋಷಾರೋಪಗಳನ್ನು ನ್ಯಾಯಾಧೀಶರು ಓದಿದರು. ಪವಿತ್ರಾ ಗೌಡ ವಿರುದ್ಧದ ಪೊಲೀಸರು ಉಲ್ಲೇಖಿಸಿದ ಆರೋಪಗಳ ಬಗ್ಗೆ ಓದುವಾಗ ನಿಮಗೆ ಕೇಳಿಸದೇ ಇದ್ದರೆ ಹೇಳಿ ಮತ್ತೊಮ್ಮೆ ಓದುವೆ ಎಂದು ಹೇಳಿದರು.
ನ್ಯಾಯಾಧೀಶರು ಆರೋಪಿಗಳ ವಿರುದ್ಧ ಪೊಲೀಸರು ಆರೋಪಗಳನ್ನು ಉಲ್ಲೇಖಿಸಿ ದೋಷಾರೋಪ ಪ್ರಕ್ರಿಯೆ ಮುಗಿಸಿದರು. ಈ ವೇಳೆ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರು. ಈ ಮೂಲಕ ದೋಷಾರೋಪ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನವೆಂಬರ್ 10ರಿಂದ ಚಾರ್ಜ್ ಶೀಟ್ ಫ್ರೇಮ್ ಕುರಿತು ತೀರ್ಮಾನ ಹಾಗೂ ಅದರ ಮೇಲೆ ವಿಚಾರಣೆ ಆರಂಭವಾಗಲಿದೆ.



