ವೈ.ಎನ್.ಹೊಸಕೋಟೆ: ಸಿದ್ದಾಪುರ ಗ್ರಾಮದ ಸರಹದ್ದಿನಲ್ಲಿ ಆಂಧ್ರಪ್ರದೇಶದ ಗಡಿಯಲ್ಲಿರುವ ಅನ್ನಲಪುರಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳರು ಕೈಚಳಕ ತೋರಿಸಿ ಹುಂಡಿ ಹಣ ದೋಚಿದ್ದಾರೆ.
ಶ್ರಾವಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮೂರು ವಾರಗಳಿಂದ ಹೆಚ್ಚಿನ ಹಣ ಸಂಗ್ರಹವಾಗಿತ್ತು, ಇದನ್ನು ಮನಗಂಡು ಈ ಕೃತ್ಯ ಎಸಗಿದ್ದಾರೆ.
ಈ ದೇವಾಲಯದಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ಕಳ್ಳತನವಾಗಿದೆ. ಈ ಹಿಂದೆ ಈ ದೇವಾಲಯವು ಉಸ್ತುವಾರಿ ಸಮಿತಿಯ ಮೂಲಕ ದೇವಸ್ಥಾನ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಕಾರಣಾಂತರಗಳಿಂದ ಈ ಸಮಿತಿಯನ್ನು ರದ್ದುಗೊಳಿಸಲಾಗಿದೆ.
ಎಂದಿನಂತೆ ಮುಜರಾಯಿ ಇಲಾಖೆಯು ಕಂದಾಯ ಇಲಾಖೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಸಮಿತಿಯ ರದ್ದಾದ ನಂತರ ಇಲ್ಲಿ ಕಳ್ಳತನ ಹೆಚ್ಚಾಗಿದೆ. ಈ ಸಂಬಂಧ ತಹಶೀಲ್ದಾರ್ ರವರು ಯಾವುದೇ ಕ್ರಮ ಕೈಗೊಂಡರೂ ಕಳ್ಳತನ ನಿಲ್ಲುತ್ತಿಲ್ಲ. ಕೈಚಳಕ ತೋರುತ್ತಿರುವ ಕಳ್ಳರು ಪೋಲೀಸ್ ಇಲಾಖೆಗೆ ಸಿಲುಕುತ್ತಿಲ್ಲ. ಈ ಸಂಬಂಧ ಒಮ್ಮೆಯಾದರೂ ಒಬ್ಬ ಕಳ್ಳನಿಂದ ಯಾವುದೇ ಹಣ ರಿಕವರಿ ಆಗಿರುವುದಿಲ್ಲ.
ಅನ್ನಲಪುರಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ ಇಲ್ಲಿ ಪದೆ ಪದೆ ಕಳ್ಳತವಾದರು ಸಹ ಮುಜರಾಯಿ ಇಲಾಖೆ, ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಯಾವುದೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಕದಲ್ಲೇ ಇರುವ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿಯನ್ನು ಹೊರಗಡೆ ತೆಗೆದುಕೊಂಡು ಬಂದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಈ ರೀತಿಯ ಕಳ್ಳತನದ ಹಿಂದೆ ಸ್ಥಳಿಯರ ಕೈವಾಡ ಇರಬಹುದು ಎಂದು ಭಕ್ತಾಧಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಸಂಬಂಧಿಸಿದವರು ಇಂತಹ ಕತರ್ನಾಗ್ ಕಳ್ಳರನ್ನು ಪತ್ತೆ ಹಚ್ಚಿ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಗುರುವಾರದಂದು ಸ್ವಗ್ರಾಮ ಆಂಧ್ರಪ್ರದೇಶದ ಕನೇಕಲ್ಲು ಗ್ರಾಮದ ಯರಿಸ್ವಾಮಿ ಮತ್ತು ಕಂಬದೂರು ಗ್ರಾಮಸ್ಥ ಇಬ್ಬರೂ ಸೇರಿ ದ್ವಿಚಕ್ರ ವಾಹನದಲ್ಲಿ ಓಬಳಾಪುರ ಗ್ರಾಮದ ದರ್ಗಾಕ್ಕೆ ಬಂದು ಹಿಂತಿರುಗುತ್ತಿದ್ದಾಗ ಮಧ್ಯಾಹ್ನ 3.30 ರ ಸಮಯದಲ್ಲಿ ವೈ.ಎನ್.ಹೊಸಕೋಟೆ ಗ್ರಾಮದಿಂದ ಮೂರು ಕಿಲೋಮೀಟರ್ ಅಂತರದಲ್ಲಿ ಜನನಿಬಿಡ ರಸ್ತೆಯಾದ ದೊಡ್ಡಹಳ್ಳಿ ರಸ್ತೆಯಲ್ಲಿ ಆತನನ್ನು ತಡೆದಿರುವ ಕಳ್ಳರು 10 ಗ್ರಾಂ ಚಿನ್ನದ ಎರಡು ಉಂಗುರಗಳು ಹಾಗೂ ೧೦ ರೂ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಐದಾರು ದಿನಗಳ ಹಿಂದೆ ರಾಜ್ಯ ಹೆದ್ದಾರಿಯಲ್ಲಿರುವ ಬುಡ್ಡಾರೆಡ್ಡಿಹಳ್ಳಿ ಗ್ರಾಮದ ರಸ್ತೆ ಪಕ್ಕ ಇರುವ ನರಸಪ್ಪ ಎಂಬುವರ ಚಿಲ್ಲರೆ ಅಂಗಡಿಗೆ ರಾತ್ರಿ ಸಮಯದಲ್ಲಿ ನುಗ್ಗಿದ ಕಳ್ಳರು ಅಲ್ಲಿದ್ದ ಸುಮಾರು ೪೦ ಸಾವಿರ ಮೌಲ್ಯದ ಸರಕು ಮತ್ತು ನಗದು ಹಣವನ್ನು ದೋಚಿದ್ದಾರೆ. ಈ ರಸ್ತೆಯೂ ಸಹಾ ಜನನಿಬಿಡ ರಸ್ತೆಯಾಗಿರುತ್ತದೆ.



