ಕಾಡಾನೆ ಜೊತೆ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿ ಕೂದಲೆಳೆ ಅಂತರದಿಂದ ಪಾರಾದ ವ್ಯಕ್ತಿಗೆ ಅರಣ್ಯ ಇಲಾಖೆ 25 ಸಾವಿರ ರೂ. ದಂಡ ವಿಧಿಸಿದೆ.
ನಂಜನಗೂಡಿನ ಬಸವರಾಜು ಎಂಬವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ.
ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಲಾರಿಯಿಂದ ಕ್ಯಾರೆಟ್ ಚೀಲ ಕಿತ್ತು ತಿನ್ನುತ್ತಿದ್ದಾಗ ಬಸವರಾಜು ಕಾರಿನಿಂದ ಇಳಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ರೊಚ್ಚಿಗೆದ್ದ ಕಾಡಾನೆ ಬಸವರಾಜು ಅವರನ್ನು ಅಟ್ಟಾಡಿಸಿ ತುಳಿಯಲು ಯತ್ನಿಸಿತ್ತು. ಅದೃಷ್ಟವಶಾತ್, ಕೊಂಚದರಲ್ಲೇ ಪಾರಾಗಿದ್ದರು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆ ಬಸವರಾಜು ಅವರ ವಿಳಾಸವನ್ನು ಪತ್ತೆ ಹಚ್ಚಿ ಕರೆತಂದು ಮುಚ್ಚಳಿಕೆ ಬರೆಸಿಕೊಂಡು, ದಂಡ ವಿಧಿಸಿದ್ದಾರೆ.
ಕಾಡಾನೆ ದಾಳಿಗೆ ಒಳಗಾಗಿದ್ದ ಬಸವರಾಜು ಅವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಆನೆ ತುಳಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ತಮಿಳುನಾಡಿನ ಊಟಿ ಕಡೆಯಿಂದ ಗುಂಡ್ಲುಪೇಟೆಯತ್ತ ಬರುವಾಗ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಬಸವರಾಜು, ರಸ್ತೆಬದಿ ಕಾಡಾನೆ ನಿಂತಿದ್ದನ್ನು ಕಂಡು ಫೋಟೋ ತೆಗೆಯಲು ಕೆಳಕ್ಕಿಳಿದಿದ್ದರು. ಇದೇ ವೇಳೆ ಆನೆ ಮುಂದೆ ಕಾರೊಂದು ಮೂವ್ ಆದಾಗ ರೊಚ್ಚಿಗೆದ್ದ ಆನೆ, ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿ ಅಲ್ಲೇ ಫೋಟೋ ತೆಗೆಯಲು ಕೆಳಗಿಳಿದಿದ್ದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗಿತ್ತು.



