ಮಧ್ಯಮ ವೇಗಿ ಅಂಬರೀಶ್ ಮಾರಕ ದಾಳಿ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಜಯಭೇರಿ ಬಾರಿಸಿತು.
ಬುಲಾವಾಯೊದಲ್ಲಿ ಶನಿವಾರ ನಡೆದ ಪಂದ್ಯ ಮಳೆಯಿಂದ 37 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ 36.2 ಓವರ್ ಗಳಲ್ಲಿ 135 ರನ್ ಗೆ ಆಲೌಟಾಗಿತ್ತು. ಭಾರತಕ್ಕೆ ಡಕ್ ವತ್ ಲೂಯಿಸ್ ನಿಯಮದಡಿ 130 ಗುರಿ ನೀಡಲಾಗಿದ್ದು. ಸುಲಭ ಗುರಿ ಬೆಂಬತ್ತಿದ ಭಾರತ ತಂಡ 13.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡ ಆರಂಭದಲ್ಲೇ ಏರಾನ್ ಜಾರ್ಜ್ (7) ವಿಕೆಟ್ ಕಳೆದುಂಡರೂ ಎರಡನೇ ವಿಕೆಟ್ ಗೆ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮಾತ್ರೆ 76 ರನ್ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು.
ವೈಭವ್ 23 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಒಳಗೊಂಡ 40 ರನ್ ಸಿಡಿಸಿದರೆ, ಆಯುಷ್ ಮಾತ್ರೆ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಲೆಂಡ್ ತಂಡ ಅಂಬರೀಶ್ ಮತ್ತು ಹೆನಿಲ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಆಲೌಟಾಯಿತು.
ನ್ಯೂಜಿಲೆಂಡ್ 69 ರನ್ ಗೆ 7 ವಿಕೆಟ್ ಕಳೆದುಕೊಂಡು 100 ರನ್ ಗಳಿಸುವುದು ಕೂಡ ಕಷ್ಟ ಎಂಬ ಪರಿಸ್ಥಿತಿಗೆ ಸಿಲುಕಿತ್ತು. ಈ ಹಂತದಲ್ಲಿ ಕಲಮ್ ಸ್ಯಾಮ್ಸನ್ (37) ಮತ್ತು ಸೆಲ್ವಿನ್ ಸಂಜಯ್ (28) 8ನೇ ವಿಕೆಟ್ ಗೆ 53 ರನ್ ಜೊತೆಯಾಟದಿಂದ ತಂಡವನ್ನು ನೂರರ ಗಡಿ ದಾಟಿಸಿದರು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ಅಂಬರೀಶ್ 3 ವಿಕೆಟ್ ಕಿತ್ತರೆ, ಹೆನಿಲ್ ಪಟೇಲ್ 2 ವಿಕೆಟ್ ಗಳಿಸಿದರು.



