ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ 1000 ದಿನ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆಬ್ರವರಿ 14 ರಂದು ಹಮ್ಮಿಕೊಂಡಿರುವ ಸರ್ಮಪಣಾ ಕಾರ್ಯಕ್ರಮದಲ್ಲಿ ರಾಜ್ಯದ ಇತಿಹಾಸದಲ್ಲೇ ಒಂದೇ ದಿನ 3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, “ರಾಜ್ಯದ 6,500 ವಸತಿ ಪ್ರದೇಶದಲ್ಲಿರುವ 3 ಲಕ್ಷ ಕುಟುಂಬಗಳಿಗೆ ನಾಳೆ ಹಾವೇರಿಯಲ್ಲಿ ನಡೆಯುವ ಸರ್ಕಾರದ ಸರ್ಮಪಣಾ ಕಾರ್ಯಕ್ರಮದಲ್ಲಿ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದರು.
6,500 ಸಾವಿರ ವಸತಿ ಪ್ರದೇಶದಲ್ಲಿ ವಾಸವಾಗಿದ್ದರೂ ಸಹ ಅವರಿಗೆ ಹಕ್ಕುಪತ್ರಗಳಿರಲಿಲ್ಲ. ದಾಖಲೆ ರಹಿತ ವಸತಿ ಪ್ರದೇಶಗಳಾಗಿವೆ. ವಾಸವಾಗಿರುವ ಜನರಿಗೆ ದಾಖಲೆ ಇರಲಿಲ್ಲ. ಕಳೆದ 50 ರಿಂದ 60 ವರ್ಷದಿಂದ ವಾಸವಾಗಿದ್ದ ಜನರಿಗೆ ಹಕ್ಕು ಪತ್ರವಿರಲಿಲ್ಲ. ಈ ಪ್ರದೇಶಗಳನ್ನು ಕಂದಾಯ ಭೂಮಿ ಎಂದು ಘೋಷಿಸಿ ಹಕ್ಕುಪತ್ರ ನೀಡಲಾಗುತ್ತಿದೆ. ಇದುವರೆಗೂ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಕಳೆದ ವರ್ಷ 36 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಈ ವರ್ಷ 1 ಲಕ್ಷದ 6 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.
ಸಿಎಂ, ಡಿಸಿಎಂ ನೇತೃತ್ವದಲ್ಲೇ ಸಭೆ
“ಫೆಬ್ರವರಿ 14 ರಂದು ನಡೆಯುವ ಹಾವೇರಿ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬರಲ್ಲ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಚಿವರು ಹಾಜರಿರುತ್ತಾರೆ. ಇದು ಸರ್ಕಾರದ 1000 ದಿನಗಳ ಪೂರೈಕೆಯ ಹಿನ್ನೆಲೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಕೆಲಸ ಮಾಡಿದ ಮುಖ್ಯಮಂತ್ರಿ ಆಗಿ ದಾಖಲೆ ಬರೆದಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ 100 ತಾಲೂಕುಗಳಲ್ಲಿ ದಾಖಲೆ ಡಿಜಿಟಲೀಕರಣ ಮುಕ್ತಾಯ
“ದಾಖಲಾತಿ ಡಿಜಿಟಲೈಜೇಷನ್ ರಾಜ್ಯದಲ್ಲಿ ಕಂದಾಯ ಇಲಾಖೆಯ ಸರ್ವರ್ ಗಳ ಸಮಸ್ಯೆ ಇಲ್ಲ. ದಿನಕ್ಕೆ 9,000 ದಿಂದ 13 ಸಾವಿರದವರೆಗೆ ಪ್ರತಿದಿನ ರಿಜಿಸ್ಟ್ರೇಷನ್ ಆಗುತ್ತಿದೆ. ಮಧ್ಯದಲ್ಲಿ ಒಂದೊಂದು ದಿನ ಸಮಸ್ಯೆ ಆಗುತ್ತಿದೆ. ಅದನ್ನು ಕೂಡ ಸರಿಪಡಿಸುವ ಕೆಲಸ ಆಗುತ್ತಿದೆ. ಕಂದಾಯ ಇಲಾಖೆಯಲ್ಲಿ ದಾಖಲಾತಿ ಡಿಜಿಟಲೈಸ್ ಮಾಡಲಾಗುತ್ತಿದೆ. ದಾಖಲೆಗಳನ್ನು ತಿದ್ದುವ ಕಳೆದುಹೋಗುವ ನಕಲಿ ಮಾಡುವ ಕೆಲಸ ಆಗುತ್ತಿದೆ” ಎಂದು ತಿಳಿಸಿದರು.
“ಜನರು ದಾಖಲೆಗಳನ್ನು ಪಡೆದುಕೊಳ್ಳಲು ಅಲೆದಾಟ ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳ ಹಿನ್ನೆಲೆಯಲ್ಲಿ 67,500 ಸಾವಿರ ಕೋಟಿ ಪುಟಗಳ ಸ್ಕ್ಯಾನಿಂಗ್ ಆಗಿದೆ. ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದೇವೆ. 100 ತಾಲೂಕುಗಳಲ್ಲಿ ಸ್ಕ್ಯಾನಿಂಗ್ ಕಂಪ್ಲೀಟ್ ಆಗಿದೆ. ಆನ್ಲೈನ್ನಲ್ಲಿ ಭೂ ಸುರಕ್ಷಾದಲ್ಲಿ ಜನರು ನೇರವಾಗಿ ಅಪ್ಲೈ ಮಾಡಿ ಮನೆಯಲ್ಲಿಯೇ ದಾಖಲೆಗಳನ್ನು ಪಡೆಯಬಹುದು” ಎಂದರು.
ವಂಶವೃಕ್ಷ ನಕಲಿ ಮಾಡಲು ಸಾಧ್ಯವಿಲ್ಲ: “ಮುಂದಿನ ವರ್ಷ ಸರ್ವೆ ಕಚೇರಿ ಹಾಗೂ ರಿಜಿಸ್ಟರ್ ಕಚೇರಿಗಳಲ್ಲಿ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ಬೆರಳ ತುದಿಯಲ್ಲಿ ಜನತೆಗೆ ದಾಖಲೆ ಸಿಗಲಿದೆ. ನಾವು ನೀಡುವ ವಂಶವೃಕ್ಷ ಆನ್ಲೈನ್ನಲ್ಲಿ ಇದೆ. ಅದು ನಕಲಿ ಮಾಡಲು ಬರಲ್ಲ” ಎಂದು ಹೇಳಿದರು.
“ಬ್ಯಾಂಕ್ ಮತ್ತು ಕೋರ್ಟ್ಗಳಲ್ಲಿ ವಂಶವೃಕ್ಷವನ್ನು ಆನ್ಲೈನ್ನಲ್ಲಿ ಚೆಕ್ ಮಾಡಬಹುದು” ಎಂದ ಸಚಿವ ಕೃಷ್ಣ ಬೈರೇಗೌಡ, ಮೊದಲು ಮಾಧ್ಯದವರು ಕೇಳಿದ ಶಾಸಕರ ವಿದೇಶ ಪ್ರವಾಸ, ಸಿಎಂ ಬದಲಾವಣೆ ಮೊದಲಾದ ರಾಜಕೀಯ ವಿಷಯದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಗೊತ್ತಿಲ್ಲದ ವಿಷಯಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ನೇರವಾಗಿ ಉತ್ತರಿಸಿದರು.



