ಬೆಂಗಳೂರು: ದೇಶಾದ್ಯಂತ 1,100ಕ್ಕೂ ಅಧಿಕ ಹುಸಿ ಬಾಂಬ್ ಕರೆ ಮಾಡಿದ್ದ ಕಿಡಿಗೇಡಿಯನ್ನು ದೆಹಲಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ದೇಶಾದ್ಯಂತ ನ್ಯಾಯಾಲಯ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ಗಳನ್ನು ಕಳುಹಿಸಿ ಭೀತಿ ಸೃಷ್ಟಿಸಿದ ಆರೋಪಿಯನ್ನು ದೆಹಲಿ ಪೊಲೀಸರು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಶ್ರೀನಿವಾಸ್ ಅಲಿಯಾಸ್ ಶ್ರೀನಿವಾಸ್ ಲೂಯಿಸ್ ಎಂಬಾತನನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಆತಂಕ ಉಂಟು ಮಾಡುವ ಉದ್ದೇಶದಿಂದ ಶ್ರೀನಿವಾಸ್ 1,100ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದ್ದ.
ಶ್ರೀನಿವಾಸ್ ವಿವಿಧ ಸುಳ್ಳು ಗುರುತುಗಳನ್ನು ಬಳಸಿಕೊಂಡು ಇಮೇಲ್ಗಳನ್ನು ರಚಿಸುತ್ತಿದ್ದ. ನ್ಯಾಯಾಲಯ ಆವರಣ, ವಿಮಾನ ನಿಲ್ದಾಣ ಟರ್ಮಿನಲ್ಗಳು, ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗಳು, ಖಾಸಗಿ ಶಾಲೆಗಳ ಕ್ಯಾಂಪಸ್ಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸುಳ್ಳು ಮಾಹಿತಿ ಹೊಂದಿರುವ ಇಮೇಲ್ಗಳನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ರವಾನಿಸಲಾಗುತ್ತಿತ್ತು. ಈ ಇಮೇಲ್ಗಳು ತಲುಪಿದ ಕೂಡಲೇ ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಎನ್ಎಸ್ಜಿ ತಂಡಗಳು ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಬೇಕಾಗುತ್ತಿತ್ತು.
ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ
ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಬಾಂಬ್ ಬೆದರಿಕೆ ಪ್ರಕರಣಗಳಲ್ಲಿ ಸಮಾನ ಮಾದರಿ ಕಂಡುಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಸೈಬರ್ ಸೆಲ್ ತನಿಖೆ ಆರಂಭಿಸಿತ್ತು. ತಾಂತ್ರಿಕ ಮಾಹಿತಿ ಮತ್ತು ಇಮೇಲ್ಗಳ ಐಪಿ ವಿಳಾಸದ ಆಧಾರದ ಮೇಲೆ ಈ ಇಮೇಲ್ಗಳ ಮೂಲ ಮೈಸೂರಿನ ಬೃಂದಾವನ ಬಡಾವಣೆಯಿಂದ ಬರುತ್ತಿರುವುದು ಪತ್ತೆ ಹಚ್ಚಿದರು.
ದೆಹಲಿ ಪೊಲೀಸರ ತಂಡ ಮೈಸೂರಿಗೆ ಆಗಮಿಸಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಶ್ರೀನಿವಾಸ್ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿತು.
ವಶಕ್ಕೆ ಪಡೆದ ವಸ್ತುಗಳು
ಆರೋಪಿಯ ಮನೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹಲವಾರು ಮೊಬೈಲ್ ಸಿಮ್ ಕಾರ್ಡ್ಗಳು, ಎರಡು ಲ್ಯಾಪ್ಟಾಪ್ಗಳು, ಒಂದು ಡೆಸ್ಕ್ಟಾಪ್ ಕಂಪ್ಯೂಟರ್ ಮತ್ತು ಬೇರೆ ಬೇರೆ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡ ಇಮೇಲ್ ಐಡಿಗಳ ಪಟ್ಟಿ ಪತ್ತೆಯಾಗಿವೆ. ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇವುಗಳನ್ನು ಸೈಬರ್ ಫೊರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



