ಬೆಂಗಳೂರು: ನಗರದ ಬಳಿ ಎರಡನೇ ವಿಮಾನ ನಿಲ್ದಾಣದ ಸಂಬಂಧ ಸ್ಥಳಗಳ ಸಮೀಕ್ಷೆ ನಡೆಸಲೆಂದು ಕೇಂದ್ರ ಸರ್ಕಾರದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ತಂಡವು ಸೋಮವಾರ ನಗರಕ್ಕೆ ಆಗಮಿಸಿದೆ. ರಾಜ್ಯ ಸರ್ಕಾರ ಗುರುತಿಸಿ ಪ್ರಸ್ತಾವನೆ ಸಲ್ಲಿಸಿರುವ 3 ಸ್ಥಳಗಳಿಗೆ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ 2 ನೇ ವಿಮಾನ ನಿಲ್ದಾಣವನ್ನು 2034 ರ ವೇಳೆ ನಿರ್ಮಿಸಲು ಕರ್ನಾಟಕ ಸರ್ಕಾರ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ಬೆಂಗಳೂರು ಸುತ್ತ ಮೂರು ಸ್ಥಳಗಳನ್ನು ಗುರುತು ಮಾಡಿ ಮಾರ್ಚ್ ಆರಂಭದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿದೆ. ಕನಕಪುರ ರಸ್ತೆಯ ನೈಸ್ ಜಂಕ್ಷನ್ನಿಂದ 10 ಕಿ.ಮೀ ದೂರದ ಸ್ಥಳ, ಹಾರೋಹಳ್ಳಿ.
ನೆಲಮಂಗಲ,ಹಾಸನ ರಸ್ತೆಯಲ್ಲಿ ನೆಲಮಂಗಲ ವೃತ್ತದಿಂದ 10 ಕಿ.ಮೀ ದೂರ ಸ್ಥಳ ಸೇರಿ ಮೂರು ದಿನ ಸಮೀಕ್ಷೆ ನಡೆಯಲಿದೆ.
ಸೋಮವಾರ ಒಂದು ಸ್ಥಳಕ್ಕೆ ಭೇಟಿ ನೀಡಿದ್ದು, ಮಂಗಳವಾರ, ಬುಧವಾರ ಇನ್ನೆರಡು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಯಾವೆಲ್ಲಾ ಅಂಶಗಳ ಪರೀಕ್ಷೆ:
ಬೆಂಗಳೂರು ಸಮೀಪದ ಮೂರು ಸ್ಥಳಗಳಲ್ಲಿ ವಾಯುಪ್ರದೇಶ, ಅಡಚಣೆ ಮಿತಿ, ಮೇಲ್ಮೈ ಸಮೀಕ್ಷೆ ಸೇರಿ ವಿವಿಧ ಅಧ್ಯಯನಗಳನ್ನು ನಡೆಸಿ ವಿವರವಾದ ವರದಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಲಿದೆ.
ಮೂರು ಸ್ಥಳ ಉತ್ತಮವಾಗಿದ್ದರೆ ಮೂರು ಸ್ಥಳ ಸೂಕ್ತ ಎಂದು ಪ್ರಾಧಿಕಾರ ವರದಿ ನೀಡುತ್ತದೆ. ಆನಂತರ ರಾಜ್ಯ ಸರ್ಕಾರವು ಅಂತಿಮ ಸ್ಥಳ ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಸರ್ಕಾರವು ಹೊಸೂರು ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ 3 ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಆ ಮೂರು ಸ್ಥಳಕ್ಕೆ ಭೇಟಿ ನೀಡಿ ಯಾವುದು ಉತ್ತಮ ಎಂದು ವರದಿ ನೀಡಿತ್ತು



