ಏಕಾಏಕಿ ಚಿರತೆ ನಡೆಸಿದ ದಾಳಿಯಲ್ಲಿ ಮಗನನ್ನು ಉಳಿಸಿಕೊಳ್ಳಲು 60 ವರ್ಷದ ತಂದೆ ಮಚ್ಚಿನೊಂದಿಗೆ ಸೆಣಸಾಡಿ ಚಿರತೆಯನ್ನು ಕೊಂದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗಿರ್ ಸೋಮನಾಥ್ ಜಿಲ್ಲೆಯ ಉನಾ ಗ್ರಾಮದಲ್ಲಿ ಬುಧವಾರ ತಂದೆ-ಮಗನ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಮಗನನ್ನು ರಕ್ಷಿಸಲು 60 ವರ್ಷದ ತಂದೆ ಚಿರತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾರೆ.
ಬುಧವಾರ ರಾತ್ರಿ ಮನೆಯ ಮುಂದಿನ ಶೆಡ್ ನಲ್ಲಿ ಕುಳಿತಿದ್ದ ಬಾಬು ಬಾಯಿ ನಾರನ್ ಭಾಯಿ ವಜಾ ಮೇಲೆ ದಾಳಿ ಮಾಡಿದ ಚಿರತೆ ಹೊತ್ತೊಯ್ಯಲು ಯತ್ನಿಸಿತು. ತಂದೆಯ ಕೂಗಾಟ ಕೇಳಿದ 27 ವರ್ಷದ ಮಗ ಶಾರ್ದೂಲ್ ಕೂಡಲೇ ಮನೆಯಿಂದ ಹೊರಗೆ ಬಂದ.
ಈ ವೇಳೆ ತಂದೆಯನ್ನು ಬಿಟ್ಟ ಚಿರತೆ ಮಗನ ಮೇಲೆ ದಾಳಿ ಮಾಡಿತು. ಚಿರತೆ ಬಾಯಿಗೆ ಮಗ ಸಿಲುಕಿದ್ದನ್ನು ನೋಡಿದ ತಂದೆ ಬಾಬು ಬಾಯಿ ಸಮೀಪದಲ್ಲೇ ಇದ್ದ ಮಚ್ಚಿನಿಂದ ದಾಳಿ ಮಾಡಿ ಚಿರತೆಯ ಮೇಲೆ ಮುಗಿಬಿದ್ದು ಕೊಚ್ಚಿ ಹಾಕಿದ್ದಾರೆ.
ಮನೆಯ ಹೊರಗಿನ ಜಗಲಿ ಮೇಲೆ ನಾನು ಮಲಗಿದ್ದಾಗ ಚಿರತೆ ನನ್ನ ಮೇಲೆ ದಾಳಿ ಮಾಡಿತು. ರಕ್ಷಣೆಗಾಗಿ ನಾನು ಮಗನನ್ನು ಕರೆದ. ಕೂಡಲೇ ರೂಮಿನಲ್ಲಿದ್ದ ಮಗ ಓಡಿ ಬಂದ. ಆದರೆ ಚಿರತೆ ನನ್ನನ್ನು ಬಿಟ್ಟು ಆತನ ಮೇಲೆ ದಾಳಿ ಮಾಡಿತು. ಮಗನನ್ನು ರಕ್ಷಿಸಲು ನಾನು ಮುಂದೆ ಹೋದಾಗ ಚಿರತೆ ಮತ್ತೆ ನನ್ನ ಮೇಲೆ ದಾಳಿ ಮಾಡಿತು.
ಇದೇ ರೀತಿ ಹಲವು ಬಾರಿ ನನ್ನ ಹಾಗೂ ಮಗನ ಮೇಲೆ ದಾಳಿ ಮಾಡುತ್ತಲೇ ಇತ್ತು. ಈ ಸಮಯದಲ್ಲಿ ಮಚ್ಚು ಹಿಡಿದು ಅದರ ಮೇಲೆ ದಾಳಿ ಮಾಡಿದೆ ಎಂದು ಬಾಬು ಬಾಯಿ ಘಟನೆಯನ್ನು ವಿವರಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಚಿರತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ಬಿದ್ದಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ತಂದೆ ಹಾಗೂ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.



