ಚೆನ್ನೈ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ನೆರೆಯ ತಮಿಳುನಾಡು ಮತ್ತು ಪುದುಚೆರಿ ಅಕ್ಷರಶಃ ಅದುರಿಹೋಗಿದೆ. ಮೂವರು ಮೃತಪಟ್ಟಿದ್ದು, ಜನಜೀವನದ ಸಂಪೂರ್ಣ ಅಸ್ತವ್ಯವಸ್ತಗೊಂಡಿದೆ.
ಶನಿವಾರ ತಡರಾತ್ರಿ ಅಪ್ಪಳಿಸಿದ ‘ಫೆಂಗಲ್’ ಚಂಡಮಾರುತ ಪುದುಚೇರಿಯಲ್ಲಿ ಇತಿಹಾಸದಲ್ಲೇ ಗರಿಷ್ಟ ದಾಖಲೆಯ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಸಿದೆ. ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯಲ್ಲೂ ದಾಖಲೆಯ ಮಳೆಯನ್ನು ಸುರಿದಿದೆ.
ಪ್ರಸ್ತುತ ಪುದುಚೇರಿ ಬಳಿ ಫೆಂಗಲ್ ಚಂಡಮಾರುತ ಸ್ಥಿರವಾಗಿದ್ದು, ಮುಂದಿನ ಮೂರು ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
ಚಂಡಮಾರುತವು ಭಾರೀ ಮಳೆಯನ್ನು ಪ್ರಚೋದಿಸಿದ್ದು, ಇದು ಪುದುಚೇರಿಯ ಬೌಲೆವಾರ್ಡ್ ಮಿತಿಯ ಹೊರವಲಯದಲ್ಲಿರುವ ಎಲ್ಲಾ ವಸತಿ ಪ್ರದೇಶಗಳು ಜಲಾವೃತವಾಗುವಂತೆ ಮಾಡಿದೆ.
ಚಂಡಮಾರುತದ ಪ್ರಭಾವಕ್ಕೆ ವಿವಿಧೆಡೆ ಮರಗಳು ಧರೆಗುರುಳಿವೆ. ಶನಿವಾರ ರಾತ್ರಿ 11 ಗಂಟೆಯಿಂದಲೇ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ
ಫೆಂಗಲ್ ಚಂಡಮಾರುತದ ಅಬ್ಬರ ಜೋರು ಪಡೆದಿರುವಂತೆಯೇ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ದುರಂತ ತಪ್ಪಿದೆ. ಫೆಂಗಲ್ ಚಂಡಮಾರುತ ಅಪ್ಪಳಿಸಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಮುಂಜಾನೆ 4 ಗಂಟೆಯಿಂದ ಸೇವೆ ಪುನಾರಂಭಿಸಿದೆ.
ಭಾರಿ ಮಳೆ ನಡುವೆಯೇ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸೇವೆ ಪುನಾರಂಭಗೊಂಡಿದ್ದು, ಈ ನಡುವೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುತ್ತಿದ್ದ ಇಂಡಿಗೋ ವಿಮಾನ ಕೂದಲೆಳೆ ಅಂತರದಲ್ಲಿ ಭಾರಿ ಅಪಘಾತದಿಂದ ಪಾರಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಯತ್ನಿಸಿದಾಗ ರನ್ ವೇ ಮೇಲೆ ವಿಮಾನ ಜಾರಿದ್ದು, ಕೂಡಲೇ ಎಚ್ಚೆತ್ತ ಪೈಲಟ್ ಮತ್ತೆ ವಿಮಾನವನ್ನು ಟೇಕ್ ಆಫ್ ಮಾಡುವ ಮೂಲಕ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ.
ರೈಲು ಮಾರ್ಗ ಬದಲಾವಣೆ
ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ರೈಲು ಸೇವೆ ಅಸ್ತವ್ಯಸ್ಥದಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚೆನ್ನೈ ವಿಮಾನ ನಿಲ್ದಾಣದ ಭಾಗವು ಜಲಾವೃತವಾಗಿದ್ದು, ವಿಮಾನ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.
ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ.
ಇನ್ನು ಭಾರಿ ಮತ್ತು ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಅಲೆಗಳು ಪ್ರಕ್ಷುಬ್ಧವಾಗಿದ್ದು ಬೀಚ್ ಗೆ ತೆರಳದಂತೆ ಜನರಿಗೆ ನಿಷೇಧ ಹೇರಲಾಗಿದೆ. ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಸಿದ್ಧ ಬೀಚ್ಗಳಿಗೆ ಜನಪ ಪ್ರವೇಶವನ್ನು ನಿರ್ಬಂಧಿಸಲು ಬ್ಯಾರಿಕೇಡ್ಗಳನ್ನು ಹಾಕ ಮುಚ್ಚಲಾಗಿದೆ. ಅಲ್ಲದೆ ಮೀನುಗಾರಿಕಾ ಸಿಬ್ಬಂದಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.



